ದಾವಣಗೆರೆ: ರೈತರೊಬ್ಬರಿಗೆ ದೋಷಪೂರಿತ ಟ್ರ್ಯಾಕ್ಟರ್ ಮಾರಾಟ ಮಾಡಿದ ಡೀಲರ್ ಹಾಗೂ ಕಂಪನಿಯ ವ್ಯವಸ್ಥಾಪಕರಿಗೆ ಇಲ್ಲಿನ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ₹ 80,000 ದಂಡ ವಿಧಿಸಿರುವುದರ ಜೊತೆ ಹೊಸ ಟ್ರ್ಯಾಕ್ಟರ್ ನೀಡಬೇಕು ಎಂದು ಆದೇಶ ನೀಡಿದೆ.
ಚನ್ನಗಿರಿ ತಾಲ್ಲೂಕಿನ ಹೆಬ್ಬಳಗೆರೆ ಗ್ರಾಮದ ರಂಗಪ್ಪ ಅವರು 2019ರ ಅಕ್ಟೋಬರ್ 15ರಂದು ₹ 7 ಲಕ್ಷ ಕೊಟ್ಟು ಚನ್ನಗಿರಿಯ ಶ್ರೀ ಗಜಾನನ ಐಷರ್ ಟ್ರೇಡರ್ಸ್ನಿಂದ ಟ್ರ್ಯಾಕ್ಟರ್ ಖರೀದಿಸಿದ್ದರು. ಕೆಲ ದಿವಸಗಳ ಬಳಿಕ ಟ್ರ್ಯಾಕ್ಟರ್ ಕೆಟ್ಟು ನಿಂತಿತು. ಶೋರೂಂಗೆ ಪರಿಶೀಲಿಸಿದಾಗ ಗೇರ್ ಬಾಕ್ಸ್ ಕೆಟ್ಟು ಹೋಗಿತ್ತು. 2020ರ ಜುಲೈ ತಿಂಗಳಲ್ಲಿ ಶೋರೂಂಗೆ ಹೋಗಿ ದುರಸ್ತಿ ಮಾಡಿಸಿಕೊಂಡು ಬಂದಿದ್ದರು.
ಅದೇ ರೀತಿ ಮೂರು ಬಾರಿ ಗೇರ್ ಬಾಕ್ಸ್ ದುರಸ್ತಿಗೆ ಬಂದಿದ್ದು, ಅದನ್ನು ದುರಸ್ತಿ ಮಾಡಿಕೊಟ್ಟಿದ್ದರೂ ಸರಿಯಾಗಲಿಲ್ಲ. ಆದ್ದರಿಂದ ರಂಗಪ್ಪ ಅವರು ಟ್ರ್ಯಾಕ್ಟರ್ ಅನ್ನು ಟ್ರ್ಯಾಕ್ಟರ್ ಅನ್ನು ವಾಪಸ್ ತೆಗೆದುಕೊಂಡು ಹೊಸ ಟ್ರ್ಯಾಕ್ಟರ್ ಕೊಡಬೇಕು ಎಂದು ಶೋರೂಂ ಮಾಲೀಕರಿಗೆ ಹೇಳಿದಾಗ ಅವರು ಕೊಡಲು ಒಪ್ಪಲಿಲ್ಲ. ಇದರಿಂದಾಗಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರು ಹೊಸ ಟ್ರ್ಯಾಕ್ಟರ್ ಕೊಡುವುದರ ಜೊತೆಗೆ ದೂರುದಾರರಿಗೆ ಆಗಿರುವ ಆರ್ಥಿಕ ನಷ್ಟಕ್ಕೆ ₹ 50,000, ಮಾನಸಿಕ ಕಿರುಕುಳವಾಗಿರುವುದಕ್ಕೆ ₹25,000 ಹಾಗೂ ಆಯೋಗದ ಖರ್ಚು ಸೇರಿ ₹ 80ಸಾವಿರವನ್ನು ರಂಗಪ್ಪ ಅವರಿಗೆ ನೀಡುವಂತೆ ಆದೇಶಿಸಿದೆ.