ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಮತ್ತು ಮೊಹರಂ ಆಚರಣೆ: ಶಾಂತಿ-ಸೌಹಾರ್ದ ಕಾಪಾಡಲು ಜಿಲ್ಲಾಧಿಕಾರಿ ಸಲಹೆ

ಗಣೇಶ ಮತ್ತು ಮೊಹರಂ ಹಬ್ಬಗಳ ಆಚರಣೆ ಪ್ರಯುಕ್ತ ನಾಗರಿಕರ ಸೌಹಾರ್ದ ಸಭೆ
Last Updated 19 ಆಗಸ್ಟ್ 2020, 16:53 IST
ಅಕ್ಷರ ಗಾತ್ರ

ದಾವಣಗೆರೆ: ಗಣೇಶ ಹಾಗೂ ಮೊಹರಂ ಹಬ್ಬಗಳನ್ನು ಸಾರ್ವಜನಿಕರು ಶಾಂತಿಯಿಂದ ಸೌಹಾರ್ದಯುತವಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಮಹಂತೇಶ ಬೀಳಗಿ ಸಲಹೆ ನೀಡಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣೇಶ ಮತ್ತು ಮೊಹರಂ ಹಬ್ಬಗಳ ಆಚರಣೆ ಪ್ರಯುಕ್ತ ಬುಧವಾರ ಆಯೋಜಿಸಲಾಗಿದ್ದ ನಾಗರಿಕರ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಾಗರಿಕರು ಕಾನೂನುಗಳನ್ನು ಉಲ್ಲಂಘನೆ ಮಾಡದೇ ಹಾಗೂ ಹಬ್ಬ ಆಚರಣೆಗೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಹಬ್ಬಗಳನ್ನು ಕಾನೂನಿಗೆ ಧಕ್ಕೆಯಾಗದಂತೆ ಆಚರಿಸಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲೆಯಲ್ಲಿ ಯಾರೊಬ್ಬರೂ ಮಾಸ್ಕ್ ಹಾಕುತ್ತಿಲ್ಲ. ಅಂತರ ಕಾಪಾಡುತ್ತಿಲ್ಲ. ಹೀಗಿರುವಾಗ ನಿಯಂತ್ರಣ ಅಸಾಧ್ಯವಾಗಿದೆ. ಕೊರೊನಾ ನಿಯಂತ್ರಣಕ್ಕೆ ಜನರ ಸಹಕಾರ ಮುಖ್ಯವಾಗಿದೆ. ಪ್ರತಿ ದಿವಸ 2ರಿಂದ 3 ಸಾವಿರ ಜನರ ಪರೀಕ್ಷೆ ಮಾಡಿಸಲಾಗುತ್ತಿದೆ. ಇದರಿಂದಾಗಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ತಿಳಿಸಿದರು.

ಮೇಯರ್ ಬಿ.ಜಿ.ಅಜಯ್ ಕುಮಾರ ಮಾತನಾಡಿ, ‘ಕೊರೊನಾ ಸಂದರ್ಭ ಇದಾಗಿದ್ದು, ಹಬ್ಬಗಳ ಆಚರಣೆಯಲ್ಲಿ ವಿಜೃಂಭಣೆ ಬೇಡ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಸರಳವಾಗಿ ಆಚರಣೆ ಮಾಡಬೇಕು’ ಎಂದರು.

‘ಕೊರೊನಾ ಸಂಕಕಷ್ಟ ಜಗತ್ತಿಗೆ ಬಂದಿದೆ. ಇಂತಹ ಸಂದರ್ಭದಲ್ಲಿ ಹಬ್ಬದ ಆಚರಣೆ ನಮ್ಮ ಆತ್ಮಸಾಕ್ಷಿಗೆ ಬಿಟ್ಟಿದ್ದು. ಎಲ್ಲರೂ ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಹಬ್ಬವನ್ನು ಶಾಂತಿಯುತವಾಗಿ ಆಚರಿಸೋಣ’ ಎಂದು ಧೂಡಾ ಅಧ್ಯಕ್ಷ ರಾಜನಳ್ಳಿ ಶಿವಕುಮಾರ್‌ ಹೇಳಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್, ‘ಗಣೇಶ ಮತ್ತು ಮೊಹರಂ ಹಬ್ಬಗಳು ಒಂದೇ ಬಾರಿಗೆ ಬಂದಿರುವುದರಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸುವ್ಯವಸ್ಥಿತವಾಗಿ ನಡೆಯಲು ಅಧಿಕಾರಿ ಮತ್ತು ನಾಗರಿಕರ ನಡುವೆ ಸಮನ್ವಯ ಅತಿ ಮುಖ್ಯವಾಗಿದೆ’ ಎಂದರು.

ಹಿಂದೂ ಸಮಾಜದ ಮುಂಖಡರಾದ ಕೆ.ಬಿ. ಶಂಕರನಾರಾಯಣ ಮಾತನಾಡಿ, ‘ಕೋವಿಡ್ ಸಂಕಷ್ಟ ಸಮಯದಲ್ಲಿ ಹಬ್ಬಗಳನ್ನು ನಗರದ ಜನರು ಶಾಂತಯುತವಾಗಿ ಹಾಗೂ ಯಶಸ್ವಿಯಾಗಿ ನೆರವೇರಿಸಬೇಕು. ಆದ್ಧೂರಿಯಾಗಿ ಆಚರಿಸದೆ ಶಾಸ್ತ್ರೋಕ್ತವಾಗಿ ಆಚರಿಸುವ ಮೂಲಕ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ’ ಎಂದರು.

ಮುಸ್ಲಿಂ ಸಮಾಜದ ಮುಖಂಡ ಸಾದಿಕ್ ಪೈಲ್ವಾನ್ ಮಾತನಾಡಿ, ‘ಜಿಲ್ಲೆಯ ಶಾಂತಿ ತೋಟದಲ್ಲಿ ಮುಳ್ಳು ಅರಳಬಾರದು, ಹೂ ಅರಳಬೇಕು. ಜೊತೆ ಜೊತೆಗೆ ಎರಡು ಹಬ್ಬಗಳು ಬಂದಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸಹಕರಿಸಿಕೊಂಡು ಹಬ್ಬ ಆಚರಿಸಬೇಕು. ನಮ್ಮ ಸಮಾಜದ ಮುಖಂಡರು ಹಾಗೂ ಮೌಲ್ವಿಗಳೊಂದಿಗೆ ಮೊಹರಂ ಹಬ್ಬದ ಕುರಿತು ಚರ್ಚಿಸಿದ್ದು, ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಹಬ್ಬ ಆಚರಣೆ ಮಾಡಲು ತೀರ್ಮಾನಿಸಲಾಗಿದೆ’ ಎಂದರು.

ಕ್ರೈಸ್ತ ಧರ್ಮದ ಫಾದರ್ ಹೊನ್ನ ನಾಯರ್ ಮಾತನಾಡಿ, ‘ಸೌಹಾರ್ದ ಸಭೆಯ ಉದ್ದೇಶ ಎಲ್ಲರಿಗೂ ಗೊತ್ತಿದೆ. ಅದು ಬಾಯಲ್ಲಿ ಮಾತ್ರ ಇರದೇ, ಕ್ರಿಯೆಯಲ್ಲಿ ಬಳಕೆಯಾಗಬೇಕು. ಜೊತೆಗೆ ಹಬ್ಬಗಳ ಆಚರಣೆಗಿಂತಲೂ ಅನುಕರಣೆ ಬಹಳ ಮುಖ್ಯವಾಗಿದೆ. ಇತ್ತೀಚೆಗೆ ಧರ್ಮ ಹಾಗೂ ದೇವರಗಳ ಹೆಸರಲ್ಲಿ ಶೋಷಣೆ, ದಂಗೆ ಹಾಗೂ ಅಸಮಾಧಾನಗಳು ಉಂಟಾಗುತ್ತಿವೆ. ಅದು ಆಗಬಾರದು. ಎಲ್ಲರೂ ಒಟ್ಟಾಗಿ ಹಬ್ಬಗಳನ್ನು ಆಚರಿಸಬೇಕು’ ಎಂದರು.

ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಡಿಎಚ್‍ಒ ಡಾ.ರಾಘವೇಂದ್ರಸ್ವಾಮಿ, ವಿವಿಧ ಸಮಾಜಗಳ ಮುಖಂಡರಾದ ಚನ್ನಬಸಪ್ಪಗೌಡ್ರು, ಸರ್ದಾರ್ ಚನ್ನಗಿರಿ, ಅಮಾನುಲ್ಲಾಖಾನ್, ಸತೀಶ್ ಪೂಜಾರ್ ಹಾಜರಿದ್ದರು.

‘ಜಿಲ್ಲೆಯಲ್ಲಿ 1,442 ರೌಡಿ ಶೀಟರ್ಸ್’

ದಾವಣಗೆರೆ: ಜಿಲ್ಲೆಯಲ್ಲಿ 1442 ರೌಡಿ ಶೀಟರ್ಸ್ ಇದ್ದು, ಎಲ್ಲವೂ ಪರ್ಮೆನೆಂಟ್ ರೆಕಾರ್ಡ್ ಅಲ್ಲ. ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ನಿಗಾ ವಹಿಸಲಾಗಿದೆ. ವಯಸ್ಸಾದವರು, ಪ್ರಕರಣ ಖುಲಾಸೆಗೊಂಡವರು, ಊರು ಬಿಟ್ಟು ಹೋಗಿ ಬೇರೆ ಕಡೆ ನೆಲೆಸಿದವರು ಹಾಗೂ ಜೀವನದಲ್ಲಿ ಬದಲಾಗಿ ಬದುಕು ನಡೆಸುತ್ತಿರುವವರನ್ನು ಸದ್ಯದಲ್ಲಿಯೇ ರೌಡಿ ಶೀಟರ್ಸ್‍ನಿಂದತೆಗೆದು ಹಾಕುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

‘ಸಾಮಾಜಿಕ ಮಾಧ್ಯಮಗಳ ಬಗ್ಗೆ ಪ್ರತಿಯೊಬ್ಬರು ಜಾಗೃತಿ ವಹಿಸಬೇಕು. ಇದಕ್ಕೆ ಹೊಸ ಕಾನೂನು ಮಾಡಬೇಕೆಂದು ಸರ್ಕಾರದ ಮಟ್ಟದಲ್ಲಿ ಈಗಾಗಲೇ ಚರ್ಚೆ ನಡೆದಿದೆ. ಅನಾವಶ್ಯಕವಾಗಿ ಜನರ ನೆಮ್ಮದಿ, ಸಾಮಾಜಿಕ ಸ್ವಾಸ್ಥ್ಯ ಕೆಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಮೊಬೈಲ್ ದುರ್ಬಳಕೆ ಕಡಿಮೆ ಆಗಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆ ಚಾಚು ತಪ್ಪದೆ ಪಾಲಿಸಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT