ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಜಿಲ್ಲಾ ವರದಿಗಾರರ ಕೂಟ ಹಾಗೂ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿರುವ 7ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಶನಿವಾರ ಬಡಾವಣೆ ಪೊಲೀಸ್ ಠಾಣೆಯಲ್ಲಿ ಸಂಚಾರ ಪೊಲೀಸರಿಗೆ ಹಬೆ ಯಂತ್ರಗಳನ್ನು ವಿತರಣೆ ಮಾಡಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ‘ಕೋವಿಡ್ ಸೋಂಕಿನ ವಿರುದ್ಧ ಹೊರಾಡಲು ಯೋಗ ಒಂದು ಪ್ರಮುಖ ಅಸ್ತ್ರ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ವೈದ್ಯಕೀಯ ವಿಭಾಗದವರು ಕೊಡುವ ಮೆಡಿಸಿನ್ ಜತೆಗೆ ಆಯುಷ್ ಇಲಾಖೆಯ ಕೆಲವು ಔಷಧಗಳು ಹಾಗೂ ಯೋಗಾಸನ ತುಂಬಾ ಉಪಯುಕ್ತವಾಗುತ್ತದೆ. ಕೋವಿಡ್ ಸೋಂಕಿಗೆ ತುತ್ತಾದವರು ಧೃತಿಗೆಡಬಾರದು. ಆತ್ಮಸ್ಥೈರ್ಯ ಬೆಳೆಸಿಕೊಂಡು, ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಯೋಗಾಸನ ಮಾಡುವುದರಿಂದ ದೈಹಿಕವಾಗಿಯೂ ಮಾನಸಿಕವಾಗಿಯೂ ನಾವು ಬಲಶಾಲಿಗಳಾತ್ತೇವೆ. ನಿತ್ಯ ಯೋಗ ಮಾಡುವುದರಿಂದ ರೋಗ, ಸೋಂಕುಗಳನ್ನು ತಡೆಗಟ್ಟುವ ಸಾಮರ್ಥ್ಯ ಬೆಳೆಯುತ್ತದೆ’ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ‘ಇದೀಗ ಮಳೆಗಾಲ ಪ್ರಾರಂಭವಾಗಿರುವುದರಿಂದ ಪೊಲೀಸರು ಮಳೆಯಲ್ಲಿ ನಿಂತು ತಮ್ಮ ಕರ್ತವ್ಯ ನಿಭಾಯಿಸಬೇಕಾಗಿದೆ. ಇಂಥ ಪರಿಸ್ಥಿತಿಯಲ್ಲಿ ಹಬೆಯಂತ್ರ ನೀಡಿರುವುದು ಒಳ್ಳೆಯ ಕಾರ್ಯ. ಜತೆಗೆ ಸಂಚಾರ ಪೊಲೀಸರಿಗೆ ಜಾಕೆಟ್ ಕೂಡ ನೀಡಿದ್ದರೆ ಚೆನ್ನಾಗಿತ್ತು’ ಎಂದು ಮನವಿ ಮಾಡಿಕೊಂಡರು.
ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಮಳಿಗೆ ಉದ್ಯಮಿ ಬಿ.ಸಿ.ಉಮಾಪತಿ ತಕ್ಷಣ ಸ್ಪಂದಿಸಿ, ‘ಪೊಲೀಸರಿಗೆ ಉಪಯುಕ್ತವಾಗುವ ಜಾಕೆಟ್ ಖರೀದಿಗಾಗಿ ₹ 1 ಲಕ್ಷ ದೇಣಿಗೆ ನೀಡಲಾಗುವುದು’ ಎಂದು ಘೋಷಿಸಿದರು.
ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ್ ರಾಯ್ಕರ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರಗೌಡ, ಬಡಾವಣೆ ಪೊಲೀಸ್ ಸಿಬ್ಬಂದಿ, ಸಂಚಾರ ಪೋಲಿಸರು ಹಾಗೂ ಆಯುಷ್ ಇಲಾಖೆ ಮತ್ತು ಯೋಗ ಒಕ್ಕೂಟದ ಸದಸ್ಯರು ಇದ್ದರು.