ಕೆಲಸ ಮಾಡದ ಮೇಲೆ ಜಿಲ್ಲೆಗೆ ಬರಬೇಡಿ: ಸಂಸದ ಜಿ.ಎಂ. ಸಿದ್ದೇಶ್ವರ

ದಾವಣಗೆರೆ: ‘10 ವರ್ಷಗಳಿಂದ ಕಥೆ ಹೇಳುತ್ತಾ ಬಂದಿದ್ದೀರಿ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಮುಗಿಸುತ್ತಿಲ್ಲ. ದಾವಣಗೆರೆಗೆ ಒಂದು ಸರಿಯಾದ ಪ್ರವೇಶ ಇಟ್ಟಿಲ್ಲ. ಕೆಲಸ ಮಾಡುವುದಿದ್ದರೆ ಮಾಡಿ. ಇಲ್ಲದೇ ಇದ್ದರೆ ಹೋಗ್ರಿ. ನಮ್ಮ ಜಿಲ್ಲೆಗೇ ಬರಬೇಡಿ’...
ನಿಧಾನಗತಿಯಲ್ಲಿ ಸಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ಸಿಟ್ಟಿಗೆದ್ದ ಸಂಸದ ಜಿ.ಎಂ. ಸಿದ್ದೇಶ್ವರ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.
ರಾಷ್ಟ್ರೀಯ ಹೆದ್ದಾರಿಯಲ್ಲಿ 4 ಕಿಲೋಮೀಟರ್ ಮುಖ್ಯ ರಸ್ತೆ, 17 ಕಿಲೋಮೀಟರ್ ಸರ್ವಿಸ್ ರಸ್ತೆ ಕಾಮಗಾರಿ ಇನ್ನಾಗಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
‘ಯಾವಾಗ ಕಾಮಗಾರಿ ಮುಗಿಸುತ್ತೀರಿ. ಸಂಬಳ ತಗೊಂಡು, ಯಾರಾದರೂ ಕಮಿಷನ್ ಕೊಟ್ಟರೆ ಅದನ್ನು ತಗೊಂಡು ಸುಮ್ಮನೆ ತಿರುಗಾಡುತ್ತೀರಿ. ಕೆಲಸ ಮಾಡುತ್ತಿಲ್ಲ’ ಎಂದು ಟೀಕಿಸಿದರು.
ಜಮೀನಿಗೆ ದರ ನಿಗದಿ ಮಾಡಿದ್ದರೂ ಹಣ ತೆಗೆದುಕೊಳ್ಳದೇ ಭೂಮಿ ಬಿಟ್ಟುಕೊಡದಿದ್ದರೆ ಕೋರ್ಟ್ಗೆ ಹಣ ತುಂಬಿ ಕಾಮಗಾರಿ ಆರಂಭಿಸಿ. ನಿಮಗೆ ಪೊಲೀಸ್ ರಕ್ಷಣೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು. ಯಾವಾಗ ಬೇಕಿದ್ದರೂ ಲಿಖಿತವಾಗಿ ಕೇಳಿದರೆ ಕೂಡಲೇ ಶಸ್ತ್ರಾಸ್ತ್ರ ಪಡೆಯ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹೇಳಿದರು.
ಗೊಲ್ಲರಹಟ್ಟಿ ಬಳಿ ಹೆದ್ದಾರಿ ಹೊಂಡ ಬಿದ್ದಿದೆ. ಹೊಳಲ್ಕೆರೆ ಹೋಗುವಲ್ಲಿ ಹೆದ್ದಾರಿ ಸರಿ ಇಲ್ಲ. ನೀರ್ತಡಿ, ಲಕ್ಕಮುತ್ತೇನಹಳ್ಳಿಯಲ್ಲಿ ಸೇತುವೆ ನಿರ್ಮಾಣ ಮಾಡಿಲ್ಲ. ಕಲಪನಹಳ್ಳಿಯಲ್ಲಿ ಕಾಮಗಾರಿ ನಡೆಸಿಲ್ಲ. ಹದಡಿ ಸಮೀಪ ಒಂದೂವರೆ ಕಿಲೋಮೀಟರ್ ದೂರ ವಾಹನಗಳು ಅಲುಗಾಡುತ್ತಾ ಸಾಗುವಂತಿದೆ. ರಸ್ತೆಯಲ್ಲಿಯೇ ಮಳೆ ನೀರು ನಿಲ್ಲುತ್ತಿದೆ. ವಿದ್ಯುತ್ ಹೈಟೆನ್ಸನ್ ಲೈನ್ ಸ್ಥಳಾಂತರವಾಗಿಲ್ಲ. ಕೂಡಲೇ ಸರಿಪಡಿಸಬೇಕು ಎಂದು ಸಂಸದರು ಸೂಚನೆ ನೀಡಿದರು.
ಸರ್ವಿಸ್ ರಸ್ತೆಯಲ್ಲಿಯೇ ನೀರಿನ ಪೈಪ್ಲೈನ್ ಹಾಕಿರುವುದರಿಂದ ರಸ್ತೆಗೆ ತೊಂದರೆಯಾಗಿದೆ. ಅದಕ್ಕಾಗಿ ಪೈಪ್ಲೈನ್ ಅಳವಡಿಸುವುದನ್ನು ನಿಲ್ಲಿಸಿದ್ದೇವೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು. ರಸ್ತೆಗೆ ತೊಂದರೆಯಾಗದಂತೆ ಪೈಪ್ಲೈನ್ ಅಳವಡಿಸಬೇಕು. ಈಗ ಉಂಟಾಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಕೆಎನ್ಎನ್ಎಲ್ ಅಧಿಕಾರಿಗಳಿಗೆ ಸೂಚಿಸಿದರು.
ಹಾಲವರ್ತಿ ಶಾಲೆಯ ಕಟ್ಟಡದ ಬುಡದಿಂದಲೇ ರಾಷ್ಟ್ರೀಯ ಹೆದ್ದಾರಿ ಹಾದುಹೋಗುತ್ತಿದೆ. ಹಾಗಾಗಿ ನೀರಿನ ಪೈಪನ್ನು ಶಾಲೆಯ ಹಿಂಭಾಗದಿಂದ ಒಯ್ಯಲಾಗುತ್ತಿದೆ. ಅದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಶಾಲಾ ಕೊಠಡಿ, ಅಡುಗೆ ಕೊಠಡಿ, ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಅದಕ್ಕೆಲ್ಲ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಅವಕಾಶ ಇಲ್ಲ. ಜನರನ್ನು ಮನವೊಲಿಸಿ ಜಾಗ ಸ್ವಾಧೀನ ಮಾಡಿಕೊಂಡು ಕೆಲಸ ಮಾಡಬೇಕು. ಮನವೊಲಿಸುವ ಕೆಲಸವನ್ನು ಉಪ ವಿಭಾಗಾಧಿಕಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಊರಿಗೆ ಊರೇ ವಿರೋಧವಿದೆ ಎಂದು ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ತಿಳಿಸಿದಾಗ, ‘ಮನವೊಲಿಸಲು ನಾನೇ ಬರುತ್ತೇನೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಶಾಸಕ ಪ್ರೊ. ಎನ್. ಲಿಂಗಣ್ಣ, ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ ಶ್ರೀನಿವಾಸುಲು ನಾಯ್ಡು, ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ, ಕೆಎನ್ಎನ್ಎಲ್ ಮುಖ್ಯ ಎಂಜಿನಿಯರ್ ಯತೀಶ್ಚಂದ್ರ, ಅಧಿಕಾರಿಗಳಾದ ಮಲ್ಲಪ್ಪ, ಶ್ರೀಕಾಂತ್, ವೆಂಕಟೇಶ್ ಅವರೂ ಇದ್ದರು.
‘ನೀವು ಪಲ್ಟಿ ಹೊಡೆಯಬೇಕು, ನಿಮಲ್ಲಿ ಯಾರಾದರೂ ಸಾಯಬೇಕು’
‘ಎಸ್ಎಸ್ ಹೈಟೆಕ್ ಆಸ್ಪತ್ರೆ ಬಳಿ ಸರ್ವಿಸ್ ರಸ್ತೆ ಬಿಟ್ಟಿದ್ದಾರೆ. ಅಲ್ಲಿ ಎರಡು ಅಂತರ ಜಂಪ್ ಆಗುತ್ತದೆ. ವಾಹನ ವೇಗವಾಗಿ ಬಂದರೆ ಪಲ್ಟಿ ಹೊಡೆಯುತ್ತದೆ. ನೀವು ಪಲ್ಟಿ ಹೊಡೆಯಬೇಕು. ನಿಮ್ಮಲ್ಲಿ ಯಾರಾದರೂ ಸಾಯಬೇಕು. ಆಗ ನಿಮಗೆ ಅರಿವಾಗುತ್ತದೆ. ಬೇರೆಯವರನ್ನು ಸಾಯಿಸಲು ನೀವಿದ್ದೀರಿ. ಆ ರಸ್ತೆಯಲ್ಲಿ ಓಡಾಡಿ ಹೇಗಿದೆ ಎಂದು ನೋಡಿಲ್ಲ. ಕಂಟ್ರಾಕ್ಟ್ ಮಾಡಿದವರು ಯಾರು?’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
‘ಸರಿಪಡಿಸುತ್ತೇವೆ’ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.