ರಾಜಗೊಂಡನಹಳ್ಳಿ (ಚನ್ನಗಿರಿ): ಗ್ರಾಮದ ಪರಿಶಿಷ್ಟ ಕಾಲೊನಿಗೆ 15 ದಿನಗಳಿಂದ ಕುಡಿಯುವ ನೀರು ಸರಬರಾಜು ಮಾಡಿಲ್ಲ ಎಂದು ದೂರಿದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
‘ಗ್ರಾಮದ ಕೊಳವೆಬಾವಿಗಳಲ್ಲಿ ನೀರು ಇದ್ದರೂ, ಗ್ರಾಮ ಪಂಚಾಯಿತಿಯ ನೀರಗಂಟಿಗಳು 15 ದಿನಗಳಿಂದ ಪರಿಶಿಷ್ಟ ಕಾಲೊನಿಗೆ ನೀರು ಸರಬರಾಜು ಮಾಡಿಲ್ಲ. ಬೇಸಿಗೆ ಕಾಲವಾಗಿರುವುದರಿಂದ ಕೊಳವೆಬಾವಿಗಳಲ್ಲಿ ಸ್ವಲ್ಪಮಟ್ಟಿಗೆ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ಕೊಳವೆಬಾವಿಗೆ ಇನ್ನು ಒಂದೆರಡು ಪೈಪ್ಗಳನ್ನು ಅಳವಡಿಸಿದರೆ ನೀರು ಲಭ್ಯವಾಗುತ್ತದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ ಅವರು ಗ್ರಾಮದೊಳಗೆ ಸಂಚರಿಸಿ ಜನರ ಸಮಸ್ಯೆಯನ್ನು ಅರಿತುಕೊಳ್ಳುತ್ತಿಲ್ಲ’ ಎಂದು ಪ್ರತಿಭಟನಕಾರರು ದೂರಿದರು.
ಪಿಡಿಒ ವಿಜಯಲಕ್ಷ್ಮೀ ಮಾತನಾಡಿ, ಚುನಾವಣೆ ಕಾರ್ಯಕ್ಕೆ ನೇಮಕ ಮಾಡಿದ್ದರಿಂದ ಗ್ರಾಮದ ಸಮಸ್ಯೆ ಅರಿಯಲು ಸಾಧ್ಯವಾಗಿರಲಿಲ್ಲ. ಚುನಾವಣೆ ಮುಗಿದಿದ್ದು, ತಕ್ಷಣ ಪರಿಶಿಷ್ಟ ಕಾಲೊನಿಗೆ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.