ಹೊನ್ನಾಳಿ: ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನಲ್ಲಿ ಉದ್ಯೋಗಖಾತ್ರಿ ಯೋಜನೆ ಅಡಿ ಏಪ್ರಿಲ್ 16ರಿಂದ ಕೆರೆ ಹೂಳೆತ್ತುವ ಕಾಮಗಾರಿ ನಡೆಸುವ ಮೂಲಕ ಸುಮಾರು 700ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ ಎಂದು ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗುಡದಯ್ಯ ಹಾಗೂ ಸ್ಫೂರ್ತಿ ಸಂಸ್ಥೆಯ ಕೋ ಆರ್ಡಿನೇಟರ್ ನೇತ್ರಾವತಿ ತಿಳಿಸಿದರು.
ತಾಲ್ಲೂಕಿನ ಕೋಣನತಲೆ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ರಾಮನಕೆರೆ, ಕೋಣನತಲೆ, ದೊಡ್ಡೇರಿ, ಹನುಮಸಾಗರ, ನೇರಲಗುಂಡಿ, ಬೇಲಿಮಲ್ಲೂರು, ಸೋಗಿಲು, ಕೂಗೋನಹಳ್ಳಿ, ಒಡೆಯರಹತ್ತೂರು, ಯರಗನಾಳು, ಕುಂಕೋವ, ಕುಂದೂರು ಗ್ರಾಮಗಳ ಕೆರೆ ಹೂಳೆತ್ತಲು ಸುಮಾರು 250 ಜನರಿಗೆ ಕೆಲಸ ನೀಡಲಾಗಿದೆ ಎಂದು ಅವರು ಹೇಳಿದರು.
ಬರದ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ಕೊಡಿಸಬೇಕು ಎಂದು ಸಾಕಷ್ಟು ಹೋರಾಟ ಮಾಡಿದ್ದರ ಪರಿಣಾಮ ನೂರು ದಿನಗಳವರೆಗೆ ಕೆಲಸ ಸಿಕ್ಕಿದೆ ಎಂದು ಸ್ಫೂರ್ತಿ ಸಂಸ್ಥೆ ಕೋ ಆರ್ಡಿನೇಟರ್ ನೇತ್ರಾವತಿ ಹೇಳಿದರು.
ತಾಲ್ಲೂಕಿನ ಪಿಡಿಒಗಳು ಹಾಗೂ ಸಂಬಂಧಪಟ್ಟ ಎಂಜಿನಿಯರ್ಗಳಿಗೆ ಕೂಲಿ ಕಾರ್ಮಿಕರಿಗೆ ಕೆಲಸ ಕೊಡಲು ಇಷ್ಟವಿಲ್ಲ. ಜೆಸಿಬಿ ಯಂತ್ರಗಳ ಮೂಲಕವೇ ಕೆಲಸ ತೆಗೆದುಕೊಳ್ಳಲು ಇಷ್ಟಪಡುತ್ತಾರೆ ಎಂದು ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗುಡದಯ್ಯ ಹೇಳಿದರು.
ತಾಲ್ಲೂಕಿನಲ್ಲಿ ಇನ್ನೂ ಸರಿಯಾಗಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನವಾಗಿಲ್ಲ ಎಂದು ಅವರು ದೂರಿದರು.