ಜಗಳೂರು: ಮಾಜಿ ಶಾಸಕ ಎಚ್.ಪಿ.ರಾಜೇಶ್ ತಮ್ಮ ಬೆಂಬಲಿಗರೊಂದಿಗೆ ಗುರುವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
‘ರಾಜ್ಯದಲ್ಲಿ ಬಿಜೆಪಿ ಗಾಳಿ ಬೀಸುತ್ತಿದ್ದು, ಅನ್ಯಪಕ್ಷಗಳ ಮುಖಂಡರು ಬಿಜೆಪಿ ಸೇರಲು ಬರುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೂಲಕ ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಆಯ್ಕೆಯಾಗುವುದು ನಿಶ್ಚಿತ’ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.
‘ನಾನು ಮೂಲತಃ ಬಿಜೆಪಿಯಿಂದಲೇ ರಾಜಕೀಯ ಪ್ರವೇಶ ಮಾಡಿದ್ದು, ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಶಾಸಕನಾಗಿ ಆಯ್ಕೆಯಾದೆ. ಆದರೆ, ಕಳೆದ ಬಾರಿ ನಾನು ಗೆಲ್ಲುವ ಲಕ್ಷಣಗಳಿದ್ದರೂ ಆ ಪಕ್ಷದ ಮುಖಂಡರು ಟಿಕೆಟ್ ಕೊಡದೆ ವಂಚಿಸಿದರು. ಆದಾಗ್ಯೂ ಕೆಲವೇ ಮತಗಳಿಂದ ಸೋಲು ಅನುಭವಿಸಿದೆ. ಬೆಂಬಲಿಗರ ಅಭಿಪ್ರಾಯದಂತೆ ಬಿಜೆಪಿಗೆ ಮರಳಿ ಬಂದಿದ್ದೇನೆ’ ಎಂದು ಎಚ್.ಪಿ.ರಾಜೇಶ್ ಹೇಳಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಚಿವ ಸಿ.ಟಿ.ರವಿ, ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹಾಜರಿದ್ದರು.
ರಾಜೇಶ್ ಅವರ ರಾಜಕೀಯ ಎದುರಾಳಿಯಾಗಿದ್ದ ಎಸ್.ವಿ.ರಾಮಚಂದ್ರ ಅವರು ಹೂಗುಚ್ಛ ನೀಡಿ ರಾಜೇಶ್ ಅವರನ್ನು ಸ್ವಾಗತಿಸಿದರು.