ದಾವಣಗೆರೆ: ಕೊರೊನಾ ವೈರಸ್ನಿಂದ ಹೋಟೆಲ್ ಉದ್ಯಮಕ್ಕೆ ಪೆಟ್ಟು ಬಿದ್ದಿದ್ದು, ಹೆದರಿಕೆಯಿಂದ ಜನರು ಊಟ, ತಿಂಡಿಗೂ ಬರುತ್ತಿಲ್ಲ. ಲಾಡ್ಜ್ಗಳನ್ನು ಬಳಸುತ್ತಿಲ್ಲ ಎಂದು ದಾವಣಗೆರೆ ಲಾಡ್ಜಿಂಗ್ ಉದ್ದಿಮೆದಾರರ ಸಂಘದ ಅಧ್ಯಕ್ಷ ಅಣಬೇರು ರಾಜಣ್ಣ ಹೇಳಿದರು.
ಕೊವಿಡ್–19 ಸಮರದ ಯಶಸ್ವಿ ನಿರ್ವಹಣೆಗಾಗಿ ದಾವಣಗೆರೆ ಲಾಡ್ಜಿಂಗ್ ಉದ್ದಿಮೆದಾರರ ಸಂಘದಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೋಟೆಲ್ ಉದ್ಯಮದಲ್ಲಿ ಬಡ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರ ಜೀವನ ನಿರ್ವಹಣೆಗೆ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ. ದುಡಿಮೆ, ಹಣವೇ ಮುಖ್ಯವಲ್ಲ’ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳ ಕುರಿತು ವಿಧಾನಸೌಧ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ಸಂತಸ ತಂದಿದೆ. ಮಾರ್ಚ್ 4ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಅಧಿಕಾರಿಗಳೆಲ್ಲ ತಂಡವಾಗಿ ಕೆಲಸ ಮಾಡಿದ್ದೇವೆ. ಇಲ್ಲಿನ ಉತ್ತಮ ಕೆಲಸವಾಗುತ್ತಿದೆ ಎಂಬ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ’ ಎಂದರು.
ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ದಾವಣಗೆರೆ ಹೋಟೆಲ್ ಉದ್ದಿಮೆದಾರರ ಸಂಘದ ಅಧ್ಯಕ್ಷ ಮೋತಿ ಆರ್. ಪರಮೇಶ್ವರ್, ಲಾಡ್ಜಿಂಗ್ ಉದ್ದಿಮೆದಾರರ ಸಂಘದ ಕಾರ್ಯದರ್ಶಿ ನಾರಾಯಣಸ್ವಾಮಿ, ಹೋಟೆಲ್ ಉದ್ಯಮಿ ವಿಠ್ಠಲರಾವ್ ಅತಿಥಿಗಳನ್ನು ಪರಿಚಯಿಸಿದರು. ಬಿ.ಕೆ. ಸುಬ್ರಹ್ಮಣ್ಯ ನಿರೂಪಿಸಿದರು.