ಹರಿಹರ: 7ನೇ ವೇತನ ಆಯೋಗದ ಶಿಫಾರಸು, ಹಳೆ ಪಿಂಚಣಿ ಯೋಜನೆ ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿ ಅವರ ಮೇಲೆ ಒತ್ತಡ ಹಾಕುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದಿಂದ ಶಾಸಕ ಬಿ.ಪಿ.ಹರೀಶ್ ಅವರಿಗೆ ಭಾನುವಾರ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರಿ ನೌಕರರಿಗೆ ಈಗಾಗಲೇ 7ನೇ ವೇತನ ಆಯೋಗದ ಸೌಕರ್ಯಗಳು ದೊರೆಯುತ್ತಿದ್ದು, ರಾಜ್ಯದಲ್ಲೂ 7ನೇ ವೇತನ ಆಯೋಗ ರಚಿಸುವ ಮೂಲಕ ವೇತನ ತಾರತಮ್ಯ ನಿವಾರಿಸಬೇಕು. ಈ ಕುರಿತ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಸಂಘದ ಪದಾಧಿಕಾರಿಗಳು ದೂರಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ವೇತನ, ಸೌಲಭ್ಯಗಳ ನೀಡುವಿಕೆಯಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ಸರ್ಕಾರವು ವೇತನ ಆಯೋಗದ ವರದಿ ಪಡೆದು ಈಗಾಗಲೇ ನೀಡಿರುವ ಶೇ 17ರ ಮಧ್ಯಂತರ ಪರಿಹಾರ ಭತ್ಯೆ ಸೇರಿ ಶೇ 40 ಫಿಟ್ಮೆಂಟ್ ಸೌಲಭ್ಯವನ್ನು ರಾಜ್ಯ ಸರ್ಕಾರಿ ನೌಕರರಿಗೆ 2022ರ ಜು.1ರಿಂದಲೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಜೂನ್ 2004ರ ನಂತರ ನೇಮಕವಾದ ರಾಜ್ಯ ಸರ್ಕಾರಿ ನೌಕರರಿಗೆ ನೀಡಿರುವ ಹೊಸ ಪಿಂಚಣಿ ವ್ಯವಸ್ಥೆ ರದ್ದುಪಡಿಸಿ, ಹಳೇ ಪಿಂಚಣಿ ಪದ್ಧತಿ ಮುಂದುವರಿಸಬೇಕು. ಪಂಜಾಬ್, ರಾಜಸ್ಥಾನ, ಛತ್ತೀಸಗಢ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶಯಗಳಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಿದ್ದು, ರಾಜ್ಯ ಸರ್ಕಾರವೂ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ ಹಳೆ ಪಿಂಚಣಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರಿ ನೌಕರರು ಮತ್ತು ಅವಲಂಬಿತ ಕುಟುಂಬ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕು. ಈ ಎಲ್ಲಾ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
ಸಂಘದ ಅಧ್ಯಕ್ಷ ಎ.ಕೆ.ಭೂಮೇಶ್, ಪದಾಧಿಕಾರಿಗಳಾದ ಎಂ.ಉಮ್ಮಣ್ಣ, ಎಂ.ವಿ.ಹೊರಕೇರಿ, ರೇವಣಸಿದ್ದಪ್ಪ ಅಂಗಡಿ, ಡಿ.ಎಂ.ಮಂಜುನಾಥಯ್ಯ, ಚಂದ್ರಪ್ಪ ದೊಗ್ಗಳ್ಳಿ, ಶರಣಕುಮಾರ ಹೆಗಡೆ, ವಿ.ಬಿ.ಕೊಟ್ರೇಶಪ್ಪ, ದಾದಾಪೀರ್, ಮುಷ್ತಾಕ್ ಅಹಮ್ಮದ್, ಮಂಜುನಾಥ್, ಪ್ರಕಾಶ್ ಇದ್ದರು.