ಹರಿಹರ: ನಗರದಲ್ಲಿನ ರಸ್ತೆಗಳನ್ನು ದುರಸ್ತಿಗೊಳಿಸದ ನಗರಸಭೆ ವಿರುದ್ಧ ನಗರದ ಆಟೊ ಚಾಲಕರು ಮತ್ತು ಮಾಲಿಕರ ಸಂಘ ಲೋಕಾಯುಕ್ತರಿಗೆ ದೂರು ಸಲ್ಲಿಸಿತು.
ನಗರದ ಗುರುಭವನದಲ್ಲಿ ಲೋಕಾಯುಕ್ತ ಪೊಲೀಸರು ಬುಧವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ದೂರು ಸಲ್ಲಿಸಲಾಯಿತು.
ರಸ್ತೆ ದುರುಸ್ತಿಪಡಿಸುಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸಿ, ಪ್ರತಿಭಟನೆಗಳನ್ನು ಮಾಡುತ್ತಿದ್ದೇವೆ, ಆದರೆ ಅಧಿಕಾರಿಗಳು ಕೇವಲ ಭರವಸೆ ನೀಡುತ್ತಾ ಕಾಲ ತಳ್ಳುತ್ತಿದ್ದಾರೆ ಎಂದು ಸಂಘದ ಮುಖಂಡರು ಆರೋಪಿಸಿದರು.
‘ಹದಗೆಟ್ಟ ರಸ್ತೆಗಳಿಂದ ಆಟೊ ಚಾಲಕರು ನಿತ್ಯ ಸಮಸ್ಯೆಯನ್ನು ಎದುರಿಸುವಂತಾಗಿದೆ. ದುಡಿದ ಹಣವನ್ನೆಲ್ಲಾ ಆಟೊ ರಿಪೇರಿಗೆ ಖರ್ಚು ಮಾಡಬೇಕಾಗಿದೆ. ಮಳೆಗಾಲದಲ್ಲಿ ಗುಂಡಿಗಳೆಲ್ಲ ನೀರು ತುಂಬಿ ರಸ್ತೆ ಯಾವುದು ಗುಂಡಿ ಯಾವುದೆಂದು ತಿಳಿಯದೇ ಅಪಘಾತಗಳಾಗುತ್ತಿವೆ. ರಸ್ತೆ ದುರಸ್ಥಿಗೆ ಆಗ್ರಹಿಸಿ ನಗರದ ವಿವಿಧ ಸಂಘಟನೆಗಳು ಹೋರಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದರು.
ನಗರಸಭೆ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು. ನಾಗರಿಕರ ಜೀವ ಮತ್ತು ಸುರಕ್ಷತೆ ಬಗ್ಗೆ ನಿರ್ಲಕ್ಷ ವಹಿಸಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ಗೌರವಾಧ್ಯಕ್ಷ ಸಿ.ಎಂ.ಸಿದ್ದಲಿಂಗಸ್ವಾಮಿ, ಅಧ್ಯಕ್ಷ ಬಿ.ಎಸ್.ಮೋಹನ್ ಗೌಡ, ಉಪಾಧ್ಯಕ್ಷರಾದ ಟಿ.ಹೆಚ್. ನಾಗರಾಜ್, ನಜೀರ್ ಉದಗಟ್ಟಿ, ಪ್ರಧಾನ ಕಾರ್ಯದರ್ಶಿ ಎಸ್.ಕೇಶವ, ನಗರಸಭೆ ಸದಸ್ಯ ಆಟೊ ಹನುಮಂತಪ್ಪ, ಹಾಗೂ ತಿಪ್ಪೇಶ್, ರಾಜು, ಸೋಮಣ್ಣ ಇದ್ದರು.