ದಾವಣಗೆರೆ: ‘ಆರೋಗ್ಯಕ್ಕೆ ಕ್ರೀಡಾಚಟುವಟಿಕೆ ಅವಶ್ಯಕ. ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರೂ ಟೆನಿಸ್ ಕ್ರೀಡೆಯಲ್ಲಿ ಭಾಗವಹಿಸಬೇಕು. ಇದರಿಂದ ನಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ದಾವಣಗೆರೆ ಡಿಸ್ಟ್ರಿಕ್ಟ್ ಟೆನಿಸ್ ಅಸೋಸಿಯೇಷನ್ನಿಂದ ಆಯೋಜಿಸಿದ್ದ ಆಹ್ವಾನಿತ ಟೆನಿಸ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
‘ಕ್ರೀಡೆಯಿಂದ ನಮ್ಮ ಜೀವನ ಶೈಲಿ ಬದಲಾಗುತ್ತದೆ. ಟೆನಿಸ್ ಆರೋಗ್ಯಕರ ಕ್ರೀಡೆಯಾಗಿದೆ. ರಶ್ಮಿ ಲೈಟ್ಸ್ ಸಹಯೋಗದಲ್ಲಿ ಹೊನಲು ಬೆಳಕಿನ ಪಂದ್ಯಗಳನ್ನು ಆಯೋಜಿಸಿರುವುದು ಸಂತೋಷದ ವಿಷಯ’ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲಾ ಟೆನಿಸ್ ಅಸೋಸಿಯೇಷನ್ನ ಕಾರ್ಯದರ್ಶಿ ಕೆ.ಪಿ. ಚಂದ್ರಪ್ಪ, ‘ನಮ್ಮ ಅಸೋಸಿಯೇಷನ್ನಿಂದ 2012ರಿಂದ ನಗರದಲ್ಲಿ ಈ ಆಹ್ವಾನಿತ ಟೆನ್ನಿಸ್ ಪಂದ್ಯಾವಳಿ ಆಯೋಜಿಸುತ್ತಾ ಬಂದಿದ್ದೇವೆ. ಡಿ.15ರವರೆಗೆ ಪಂದ್ಯಗಳು ನಡೆಯಲಿವೆ. ದಾವಣಗೆರೆಯಲ್ಲಿ ಪಂದ್ಯಾವಳಿ ಆಯೋಜಿಸುತ್ತಿರುವುದಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ಇದೆ’ ಎಂದರು.
ಕಳೆದ ಬಾರಿ 300 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಬಾರಿ ಸ್ಪರ್ಧಿಗಳ ಸಂಖ್ಯೆ ಹೆಚ್ಚಿದೆ. ಈ ಬಾರಿ ಅಂಗವಿಕಲರಿಗೆ ವಿಶೇಷವಾಗಿ ಗಾಲಿ ಕುರ್ಚಿಯ ಟೆನಿಸ್ ಪಂದ್ಯ ಆಯೋಜಿಸಲಾಗಿದೆ. ಅಂಗವಿಕಲರ ಟೆನಿಸ್ ಪಂದ್ಯಾವಳಿಗಳು ಬೆಂಗಳೂರು ಬಿಟ್ಟರೆ ಎಲ್ಲಿಯೂ ನಡೆದಿಲ್ಲ. ಇಲ್ಲಿನ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ₹ 1.15 ಲಕ್ಷ ಬಹುಮಾನ, ಪಾರಿತೋಷಕ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಅಸೋಸಿಯೇಷನ್ ಕಾರ್ಯಾಧ್ಯಕ್ಷ ಡಾ.ಎಸ್.ಎಂ. ಬ್ಯಾಡಗಿ, ಸಿ.ಎಸ್. ಮೂರ್ತಿ, ಆರ್.ಎಸ್. ವಿಜಯಾನಂದ, ರಘುರಾಮ್, ಡಾ. ಶರತ್ರಾಜ್, ರಾಘು ಅಂಬರ್ಕರ್, ವಿಶಾಲ್, ನಂದಗೋಪಾಲ, ಕಿರಣ, ಚಳ್ಳಕೆರೆ ರಾಜು, ಹುಬ್ಬಳ್ಳಿ ವೀರಣ್ಣ, ಡಾ. ಶಿವಕುಮಾರ ಇದ್ದರು.
ಪಂದ್ಯಾವಳಿಯಲ್ಲಿ ಮೈಸೂರು, ಹುಬ್ಬಳ್ಳಿ, ತುಮಕೂರು, ಬೆಂಗಳೂರು, ಚಿತ್ರದುರ್ಗ, ಸಿಂಧನೂರು, ಮಾನ್ವಿ, ಗೋಕಾಕ ಸೇರಿ ರಾಜ್ಯದ ವಿವಿಧೆಡೆಯ ಸ್ಪರ್ಧಿಗಳು ಭಾಗವಹಿಸಿದ್ದರು.