ಹರಿಹರ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಮಧ್ಯಾಹ್ನ ನವಜಾತ ಗಂಡು ಶಿಶು ಸಾವಿಗೀಡಾಗಿದ್ದು, ಇದಕ್ಕೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣ ಎಂದು ಪೋಷಕರು ಹಾಗೂ ಸಂಬಂಧಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಆಶ್ರಯ ಕಾಲೊನಿ ನಿವಾಸಿ ಕಾವ್ಯ ಹೆರಿಗೆಗಾಗಿ ವೈದ್ಯರ ಸಲಹೆ ಮೇರೆಗೆ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಬೆಳಿಗ್ಗೆ ವೈದ್ಯೆ ಸವಿತಾ ಅವರು ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಶಿಶುವನ್ನು ಇನ್ಕ್ಯೂಬೇಟರ್ನಲ್ಲಿ ಇರಿಸುವಂತೆ ಶುಶ್ರೂಷಕಿಗೆ ಸೂಚಿಸಿದ್ದರು.
ವೈದ್ಯರ ಸಲಹೆಯಂತೆ ಹೆರಿಗೆ ವಿಭಾಗದ ಶುಶ್ರೂಷಕಿ ಹೇಮಾವತಿ ಮಾಡಿದ್ದರು. ತದನಂತರ ಶಿಶುವನ್ನು ಪರೀಕ್ಷಿಸಿದಾಗ ಮೃತಪಟ್ಟಿರುವುದು ತಿಳಿದು ಬಂದಿದೆ.
ಪೋಷಕರ ಆರೋಪ: ಹೆರಿಗೆ ನಂತರ ಶಿಶು ಅಳುತ್ತಿತ್ತು ಹಾಗೂ ಆರೋಗ್ಯವಾಗಿತ್ತು. ಶಿಶುವನ್ನು ಇನ್ಕ್ಯೂಬೇಟರ್ನಲ್ಲಿ ಇಟ್ಟ ನಂತರ ಶಿಶುವನ್ನು ಪರೀಕ್ಷಿಸಲು ಬಹಳ ಹೊತ್ತು ಯಾರೂ ಬರಲಿಲ್ಲ. ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮಗು ಸಾವಿಗೀಡಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಆಸ್ಪತ್ರೆ ಬಳಿ ಉದ್ರಿಕ್ತ ಸ್ಥಿತಿ ನಿರ್ಮಾಣವಾಗುವ ಲಕ್ಷಣ ಗೋಚರಿಸಿದಾಗ ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.
ವೈದ್ಯರು ಹಾಗೂ ಶುಶ್ರೂಷಕಿಯರು ಪೋಷಕರಲ್ಲಿ ಕ್ಷಮೆಯಾಚಿಸಿದ ಬಳಿಕ ಪ್ರಕರಣ ಶಾಂತ ರೀತಿಯಲ್ಲಿ ಇತ್ಯರ್ಥವಾಗಿದೆ ಎಂದು ತಿಳಿದುಬಂದಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಪೊಲೀಸರು ಹಾಗೂ ಶಿಶವನ್ನು ಕಳೆದುಕೊಂಡ ಪೋಷಕರು ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.