ದಾವಣಗೆರೆ: ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ಪುನರ್ಮನನ ತರಗತಿ ನಡೆಸುವ ಮೂಲಕ ಈಗಾಗಲೇ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಮಾನಸಿಕ ಸ್ಥೈರ್ಯ ಮೂಡಿಸಬೇಕು. ಪರೀಕ್ಷಾ ಸಮಯದಲ್ಲಿ ಆರೋಗ್ಯ ಸುರಕ್ಷತೆಗೆ ಕ್ರಮ ವಹಿಸಬೇಕು ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಜಿಲ್ಲಾ ಘಟಕ ಸರ್ಕಾರವನ್ನು ಆಗ್ರಹಿಸಿತು.
ರಾಜ್ಯದಲ್ಲಿ ಹತ್ತನೇ ತರಗತಿ ಪರೀಕ್ಷೆ ನಡೆಸಲು ಸಿದ್ಧವಿರುವುದಾಗಿ ಹೇಳಿರುವ ಶಿಕ್ಷಣ ಇಲಾಖೆಯ ನಡೆಯನ್ನು ಸ್ವಾಗತಿಸಿರುವ ವೇದಿಕೆ ಪದಾಧಿಕಾರಿಗಳು, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಮೂಲಕ ಶಿಕ್ಷಣ ಸಚಿವ ಸುರೇಶ್ಕುಮಾರ್ ಅವರಿಗೆ ಮನವಿಸಲ್ಲಿಸಿ ಒತ್ತಾಯಿಸಿದ್ದಾರೆ.
‘ಲಾಕ್ಡೌನ್ ಅವಧಿಯಲ್ಲಿ ವಿದ್ಯಾರ್ಥಿಗಳು ಬಹಳಷ್ಟು ಪ್ರಮಾಣದಲ್ಲಿ ಬದಲಾವಣೆಗಳನ್ನು ಅನುಭವಿಸಿರುವುದರಿಂದ ಮಾನಸಿಕ ವಿಚಲಿತರಾಗಿರುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಒಂದು ವಾರವಾದರೂ ಶಿಕ್ಷಕರ ನೇರ ಸಂಪರ್ಕ ಅಥವಾ ಮಾರ್ಗದರ್ಶನ ಸಿಕ್ಕರೆ ಧೈರ್ಯ ತಂದುಕೊಂಡು ಪರೀಕ್ಷೆ ಬರೆಯಲು ಶಕ್ತರಾಗುತ್ತಾರೆ’ ಎಂದು ವೇದಿಕೆ ಜಿಲ್ಲಾ ಅಧ್ಯಕ್ಷ ಆರ್. ಪರಮೇಶ್ವರಪ್ಪ ಆಗ್ರಹಿಸಿದರು.
ಡಿಡಿಪಿಐ ಪರಮೇಶ್ವರಪ್ಪ ಮನವಿ ಸ್ವೀಕರಿಸಿ ಮಾತನಾಡಿ, ‘ದಾವಣಗೆರೆ ಜಿಲ್ಲೆಯಲ್ಲಿ ಪ್ರತಿಯೊಬ್ಬ ವಿಷಯ ಶಿಕ್ಷಕರು ಕನಿಷ್ಠ 5 ವಿದ್ಯಾರ್ಥಿಗಳಂತೆ ದತ್ತು ತೆಗೆದುಕೊಂಡು ಅವರನ್ನು ಒಂದು ವಾರ ಕಾಲ ಮಾತನಾಡಿಸಿ ಮಾನಸಿಕ ಧೈರ್ಯ ತುಂಬುವಂತೆ ತಿಳಿಸಲಾಗಿದೆ. ಈ ಬಗ್ಗೆ ಶಿಕ್ಷಕರು ಕಾರ್ಯಪ್ರವೃತ್ತರಾಗಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿಯೂ ಶ್ರಮಿಸಲಾಗುತ್ತಿದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿ.ಎಂ. ಮಂಜುನಾಥ ಮತ್ತಿ, ಕಾಲಯ್ಯ ಕುಕ್ಕುವಾಡ, ಕೊಂಬಳಿ ಬಸವರಾಜಪ್ಪ, ನಿಂಗಪ್ಪ, ರಾಜು, ಶರಣಬಸವಯ್ಯ ಇದ್ದರು.