ಮೊಳಕಾಲ್ಮುರು: ಪ್ರಕೃತಿ ದತ್ತವಾಗಿ ಸಿಗುವ ಹಣ್ಣು, ತರಕಾರಿಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ದೇಹಕ್ಕೆ ಅಗತ್ಯವಿರುವ ಅಯೋಡಿನ್ ಪಡೆದುಕೊಳ್ಳಲು ಸಾಧ್ಯ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುಧಾ ಹೇಳಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಶಿಶು ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ವಿಶ್ವ ಅಯೋಡಿನ್ ನಿಯಂತ್ರಣ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಗರ್ಭಿಣಿಯರಿಗೆ 200-290 ಎಂಜಿ, ಮಕ್ಕಳಿಗೆ 50-90 ಎಂಜಿ ಅಯೋಡಿನ್ ಅಗತ್ಯವಿದೆ. ಇದರ ಕೊರತೆಯಾದಲ್ಲಿ ಗಂಟಲು ಬೇನೆ, ಪದೇ, ಪದೇ ಗರ್ಭಪಾತ, ನಿಶ್ಯಕ್ತಿ ಹಾಗೂ ಆಂಗವಿಕಲ ಮಕ್ಕಳ ಜನನ, ದೈಹಿಕ ಮತ್ತು ಮಾನಸಿಕ ಕುಂಠಿತ ಮಗುವಿನ ಜನನ ಸಮಸ್ಯೆ ಕಂಡುಬರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಅಯೋಡಿನ್ ಸಮತೋಲನೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ಸವಿತಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುಮೂರ್ತಿ, ಸಂರಕ್ಷಣಾಧಿಕಾರಿ ವಿಶಾಲಾಕ್ಷಿ, ಬಿಪಿಎಂ ನವೀನ್, ಸುರಕ್ಷಣಾಧಿಕಾರಿ ರೂಪ, ನಾಗವೇಣಿ ಇದ್ದರು.