ನ್ಯಾಮತಿ: ತಾಲ್ಲೂಕಿನ ಕಲ್ಬಿಗಿರಿ ಬೆಟ್ಟದ ಮೇಲಿರುವ ಕಲ್ಬಿಗಿರಿ ರಂಗನಾಥ ಸ್ವಾಮಿಯ ದೀಪಾರಾಧನೆ, ಜ್ಯೋತಿದರ್ಶನ ಮತ್ತು ಬನ್ನಿ ಮತ್ತು ಅಂಬುಸೇವೆ ಜಾತ್ರಾ ಮಹೋತ್ಸವ ಭಾನುವಾರ ಭಕ್ತರ ಸಮ್ಮುಖದಲ್ಲಿ ನಡೆಯಿತು.
ದೇವಾಲಯ ವಿಜಯನಗರ ಸಂಸ್ಥಾನದ ಬೆಳಗುತ್ತಿ ಅರಸರ ಧರ್ಮದರ್ಶಿ ವಂಶಸ್ಥರ ಆಳ್ವಿಕೆಗೆ ಒಳಪಟ್ಟಿದೆ.
ಅಲಂಕರಿಸಿದ ಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಬನ್ನಿ ವೃಕ್ಷದ ಕಟ್ಟೆಗೆ ತಂದು, ಅರ್ಚಕರು ಪೂಜೆ ಸಲ್ಲಿಸಿದರು. ನಂತರ ಬನ್ನಿ ವಿತರಣೆ, ವಿನಿಮಯ ಕಾರ್ಯಕ್ರಮ ನಡೆಯಿತು.
ಬನ್ನಿ ಮಹೋತ್ಸವದ ಅಂಗವಾಗಿ ಶುಕ್ರವಾರ, ಶನಿವಾರ ರಂಗನಾಥ ಸ್ವಾಮಿಯ ಶಿಲಾಮೂರ್ತಿಗೆ ದೀಪಾರಾಧನೆ, ವಿಶೇಷ ಅಲಂಕಾರ ಪೂಜೆ ನಡೆಯಿತು. ಭಾನುವಾರ ಬನ್ನಿಯ ನಂತರ ಭೂತಪ್ಪನ ಸೇವೆ ಕಾರ್ಯಕ್ರಮ ಧರ್ಮದರ್ಶಿ ಬಿ.ಪಿ. ಸುಬ್ರಮಣ್ಯ ರಾಜ ಮತ್ತು ಬಿ.ಪಿ. ನವೀನ್ ರಾಜ ಅರಸ್ ನೇತೃತ್ವದಲ್ಲಿ ನಡೆಯಿತು.
ತಹಶೀಲ್ದಾರ್ ತನುಜಾ ಟಿ. ಸವದತ್ತಿ, ಉಪ ತಹಶೀಲ್ದಾರ್ ನ್ಯಾಮತಿ ನಾಗರಾಜಪ್ಪ, ಸಬ್ ಇನ್ಸ್ಪೆಕ್ಟರ್ ಹನುಮಂತಪ್ಪ ಎಂ. ಶಿರಿಹಳ್ಳಿ, ಎಎಸ್ಐ ಬಸವರಾಜ, ಕಾನ್ಸ್ಟೆಬಲ್ ರಾಜು ದೊಡ್ಡಮನೆ, ಮಂಜಣ್ಣ ಚನ್ನೇಶ, ಆರೋಗ್ಯ ಇಲಾಖೆಯ ಜಗದೀಶ ಕೋಡಿಹಳ್ಳಿ ಮತ್ತು ಸಿಬ್ಬಂದಿ ಇದ್ದರು.
ಆರೋಗ್ಯ ಇಲಾಖೆ ಸಿಬ್ಬಂದಿ ಭಕ್ತರ ಆರೋಗ್ಯ ತಪಾಸಣೆ ಮಾಡುವ ಕೋವಿಡ್ ಮುಂಜಾಗ್ರತೆ ಕೈಗೊಂಡಿದ್ದರು.