ಹೊನ್ನಾಳಿ: ಆದಿತ್ಯ ಗುರುಕುಲಂ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುತ್ತಿರುವುದು ಅನುಕರಣೀಯ ಎಂದು ಜಗಳೂರು ತಾಲ್ಲೂಕಿನ ಕಣ್ವಗುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬಲಮುರಿ ಕ್ರಾಸ್ನಲ್ಲಿರುವ ಆದಿತ್ಯ ಗುರುಕುಲಂ ಶಾಲೆಯ ಮೊದಲನೇ ವರ್ಷದ ಶಾಲಾ ವಾರ್ಷಿಕೋತ್ಸವ, ಆದಿತ್ಯ ಕಲಾ ಉತ್ಸವ ಸಮಾರಂಭ ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು.
ಮಕ್ಕಳಿಗೆ ಜಂಕ್ ಫುಡ್ ನೀಡದಂತೆ ಸಲಹೆ ನೀಡಿದ ಅವರು, ‘ಸಾತ್ವಿಕ ಆಹಾರ ಸೇವನೆಯಿಂದಲೂ ಮಕ್ಕಳ ಬುದ್ಧಿ ಮತ್ತು ಮನಸ್ಸು ವಿಕಸಿತಗೊಳ್ಳುತ್ತದೆ. ಆರೋಗ್ಯವಂತ ಮತ್ತು ಸಂಸ್ಕಾರವಂತ ಯುವಕ, ಯುವತಿಯರು ದೇಶದ ಸಂಪತ್ತು‘ ಎಂದು ಅಭಿಪ್ರಾಯಪಟ್ಟರು.
‘ಆದಿತ್ಯ ಗುರುಕುಲಂ ಶಾಲೆಯನ್ನು ತೆರೆಯುವ ಮೂಲಕ ಈ ಭಾಗದಲ್ಲಿ ಐಸಿಎಸ್ಇ ಪಠ್ಯಕ್ರಮದ ಶಾಲೆಯ ಕೊರತೆ ನೀಗಿದೆ. ಪಾಲಕರ ಸಲಹೆ, ಸಹಕಾರ ನಿರಂತರವಾಗಿರಲಿ’ ಎಂದು ಆದಿತ್ಯ ಗುರುಕುಲಂ ಶಾಲೆಯ ಅಧ್ಯಕ್ಷ ಜಿ.ಮರಿಗೌಡ ಮನವಿ ಮಾಡಿದರು.
ಚಿತ್ರನಟ ಅರ್ಜುನ್ ಗೌಡ ಮಾತನಾಡಿ, ‘ಮಕ್ಕಳಿಗೆ ವಿದ್ಯೆ ನೀಡುವುದು ದೇವರ ಕೆಲಸವಾಗಿದ್ದು, ಶಿಕ್ಷಕರು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು’ ಎಂದರು.
ಶಾಲೆಯು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು, 130ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ದಯಾನಂದ ಪ್ರಭು ತಿಳಿಸಿದರು.
ಪ್ರಾಂಶುಪಾಲ ಪರಮೇಶಿ ವಾರ್ಷಿಕ ವರದಿ ವಾಚನ ಮಾಡಿದರು. ಲಿಟ್ಲ್ ಚಾಂಪ್ಸ್ ಗುರುಕುಲಂ ಸಂಸ್ಥೆಯ ವ್ಯವಸ್ಥಾಪಕ ಪೃಥ್ವಿರಾಜ್ ಬಾದಾಮಿ, ಹನುಮಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೃತಿ ಮಂಜುನಾಥ್ ಮಾತನಾಡಿದರು.