ಚನ್ನಗಿರಿ: ‘ಕೊರೊನಾ ಕಾರಣದಿಂದಾಗಿ ಜಿಲ್ಲೆಯ ತಾಲ್ಲೂಕುಗಳಿಗೆ ಪ್ರವಾಸ ಮಾಡಲು ಸಾಧ್ಯವಾಗಿಲ್ಲ. ಮೂರು ತಿಂಗಳಲ್ಲಿ ಅಧಿಕಾರಿಗಳ ತಂಡದೊಂದಿಗೆ ಜನಸಂಪರ್ಕ ಸಭೆ ನಡೆಸಿ, ಜನರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಭರವಸೆ ನೀಡಿದರು.
ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಗ್ರಾಮದಲ್ಲಿ ಸೋಮವಾರ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಿಪ್ಪಗೊಂಡನಹಳ್ಳಿ ಗ್ರಾಮದಿಂದ ಗಾಂಧಿನಗರ-ಹನುಮಂತನಗರ ಮೂಲಕ ಜೋಳದಹಾಳ್ ಗ್ರಾಮದ ವರೆಗೆ 3.8 ಕಿ.ಮೀ., ಚಿಕ್ಕೂಲಿಕೆರೆಯಿಂದ ಅಜ್ಜಿಹಳ್ಳಿ-ತಿಮ್ಲಾಪುರ-ಗಾಳಿಹಳ್ಳಿ ಗ್ರಾಮದವರೆಗೆ 4.3 ಕಿ.ಮೀ. ಹಾಗೂ ಆಗರಬನ್ನಿಹಟ್ಟಿ ಗ್ರಾಮದಿಂದ ಹೊಸ ಬನ್ನಿಹಟ್ಟಿ- ಬುಳುಸಾಗರ-ಕಗತೂರು- ರಾಮಗೊಂಡನಹಳ್ಳಿ ಮೂಲಕ ಕೊಂಡದಹಳ್ಳಿವರೆಗೆ 12.26 ಕಿ.ಮೀ. ರಸ್ತೆಯನ್ನು ₹ 14.42 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ‘ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗ್ರಾಮದ ನಿಂಗಣ್ಣನ ಕೆರೆಯಿಂದ ತಾಲ್ಲೂಕಿನ ಮಾವಿನಹೊಳೆ ಗ್ರಾಮದ ಕೆರೆಗೆ ನೀರು ಹರಿಸಿ, ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜ ನೆಗೆ ಹದಿನೈದು ದಿನಗಳಲ್ಲಿ ಅನುದಾನ ಬಿಡುಗಡೆಯಾಗಲಿದೆ’ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ್ ನಾಯ್ಕ, ಮಂಜುಳ ಟಿ.ವಿ. ರಾಜು, ತುಮ್ಕೋಸ್ ನಿರ್ದೇಶಕ ಟಿ.ವಿ. ರಾಜು ಪಟೇಲ್, ಮಲ್ಲಿಕಾರ್ಜುನ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆಂಚಪ್ಪ, ಸದಸ್ಯೆ ಪುಷ್ಪಾ, ಎಪಿಎಂಸಿ ನಿರ್ದೇಶಕ ಟಿ. ನಾಗರಾಜ್ ಇದ್ದರು.