ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಿಗ್ಗೆಯಿಂದ ಸಂಜೆ 5ರ ವರೆಗೆ ಪ್ರತಿಭಟನೆ ನಡೆಸಿದ ಉಪನ್ಯಾಸಕರು ಸರ್ಕಾರದ
ವಿರುದ್ಧ ಘೋಷಣೆ ಕೂಗಿದರು.10 ವರ್ಷಗಳಿಂದ ಉಪನ್ಯಾಸಕರ ಸಮಸ್ಯೆ ಸಂಬಂಧ ಹಲವು ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಶೀಘ್ರ 21 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.ಉಪನ್ಯಾಸಕರಿಗೆ ಎರಡನೇ ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡಬೇಕು. ಪ್ರೌಢಶಾಲೆಯಿಂದ ಪದೋನ್ನತಿ ಹೊಂದಿದ ಉಪನ್ಯಾಸಕರಿಗೆ 10, 15, 20, 25 ವರ್ಷಗಳ ಕಾಲಮಿತಿ ವೇತನ ಬಡ್ತಿಯನ್ನು ಕೂಡಲೇ ಮಂಜೂರು ಮಾಡಬೇಕು. ಕಾರ್ಯಭಾರ ಸಂಬಂಧ ಉನ್ನತ ಮಟ್ಟದ ಪರಿಷತ್ ಸಮಿತಿ ರಚಿಸಬೇಕು. ಅಲ್ಲಿಯವರೆಗೆ ಉಪನ್ಯಾಸಕರಿಗೆ 16 ಗಂಟೆಗಳ ಬೋಧನಾ ಅವಧಿ ಮುಂದುವರಿಸಬೇಕು. ನೆಟ್, ಸ್ಲೆಟ್, ಪಿಎಚ್.ಡಿ ಮಾಡಿದವರಿಗೆ ಪದವಿ ಕಾಲೇಜುಗಳಿಗೆ ಬಡ್ತಿ ನೀಡಬೇಕು. ಅನುದಾನಿತ ಪಿಯು ಕಾಲೇಜುಗಳ ಉಪನ್ಯಾಸಕರ ಕಾಲ್ಪನಿಕ ವೇತನ ಸಮಸ್ಯೆ ಬಗೆಹರಿಸಬೇಕು. ಬಿಇಡಿ ಪೂರೈಸಿ ಮರಳಿದವರಿಗೆ ವೇತನ ಸಹಿತ ರಜೆ ಎಂದು ಪರಿಗಣಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.