ಹೊನ್ನಾಳಿ: ನಗರದಲ್ಲಿ ಒಂದು ತಿಂಗಳಿನಿಂದ ಜನರಿಗೆ ಕಾಟ ಕೊಡುತ್ತಿದ್ದ ಮುಸಿಯಾವನ್ನು ಸೆರೆಹಿಡಿದು ಶಿವಮೊಗ್ಗದ ಲಯನ್ ಸಫಾರಿಗೆ ಕಳುಹಿಸಲಾಯಿತು. ಪಟ್ಟಣದಲ್ಲಿ ಸೆರೆ ಹಿಡಿದ ಎರಡನೇ ಮುಸಿಯಾ ಇದಾಗಿದೆ.
ಮುಸಿಯಾನ ಹುಚ್ಚಾಟಕ್ಕೆ 30 ಜನರು ಗಾಯಗೊಂಡಿದ್ದರು. ಇದರಿಂದ ಪುರಸಭೆಯ ಆಡಳಿತ ಮಂಡಳಿ ಮುಸಿಯಾವನ್ನು ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಭಾನುವಾರ ಬೆಳಿಗ್ಗೆಯಿಂದಲೇ ಮುಸಿಯಾವನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಕಾರ್ಯತಂತ್ರ ರೂಪಿಸಿ ಸಂಜೆ 4 ಗಂಟೆ ವೇಳೆಗೆ ಅದನ್ನು ಹಿಡಿಯುವಲ್ಲಿ ಯಶಸ್ವಿಯಾಯಿತು.
ಮುಸಿಯಾವನ್ನು ಜೀವಸಹಿತ ಹಿಡಿಯಲು ಬೋನು ಸಹಿತ ಆಗಮಿಸಿದ್ದ ತಜ್ಞರ ತಂಡ ಅದನ್ನು ಹಿಡಿಯಲು ಸಾಕಷ್ಟು ಶ್ರಮಪಟ್ಟಿತು. ಕೊನೆಯಲ್ಲಿ ಅರಿವಳಿಕೆ ತಜ್ಞರು ಮದ್ದನ್ನು ಚುಚ್ಚಿ ಪ್ರಜ್ಞೆ ತಪ್ಪಿಸಿ ಹಿಡಿಯಬೇಕಾಯಿತು. ಮುಸಿಯಾವನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯ 5 ಜನರ ತಂಡ ಹಾಗೂ ಪುರಸಭೆಯ ಸಿಬ್ಬಂದಿ ಸಾಕಷ್ಟು ಬೆವರು ಹರಿಸಬೇಕಾಯಿತು.
ಪುರಸಭೆಯ ಅಧ್ಯಕ್ಷ ಕೆ.ವಿ. ಶ್ರೀಧರ್, ಹೆಲ್ತ್ ಇನ್ಸ್ಪೆಕ್ಟರ್ ನಾಗೇಶ್, ಸಿಬ್ಬಂದಿ ರವಿ, ಲಕ್ಷ್ಮಣ್, ರಾಜು, ಅಂಕಣ್ಣ ಹಾಜರಿದ್ದರು.
ಐದು ತಿಂಗಳಿನಿಂದ ಕಾಟ ಕೊಡುತ್ತಿದ್ದ ಮುಸಿಯಾವನ್ನು ಈಚೆಗೆ ಸೆರೆಹಿಡಿಯಲಾಗಿತ್ತು. 40ಕ್ಕೂ ಹೆಚ್ಚು ಸಾರ್ವಜನಿಕರಿಗೆ ಕಚ್ಚಿ ಗಾಯಗೊಳಿಸಿತ್ತು. ಅದನ್ನು ಇದೇ ತಜ್ಞರ ತಂಡ ಹಿಡಿದು ಲಯನ್ ಸಫಾರಿಗೆ ಬಿಟ್ಟಿದ್ದನ್ನು ಸ್ಮರಿಸಬಹುದು.