ದಾವಣಗೆರೆ: ಪ್ರಕರಣಗಳು ರಾಜೀಯಲ್ಲಿ ಇತ್ಯರ್ಥಗೊಂಡರೆ ಕಕ್ಷಿದಾರರಿಗೆ ಸಮಯ, ಶ್ರಮ, ಹಣ ಉಳಿತಾಯವಾಗುತ್ತದೆ. ಅದಕ್ಕಾಗಿ ಫೆಬ್ರವರಿ8ರಂದು ಈ ವರ್ಷದ ಮೊದಲ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ.ವೈ. ಬಸಾಪುರ್ ಹೇಳಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಪ್ರತಿ ಎರಡು ಅಥವಾ ಮೂರು ತಿಂಗಳುಗಳಿಗೊಮ್ಮೆ ಲೋಕ ಅದಾಲತ್ ಮಾಡಲಾಗುತ್ತದೆ. ಈ ವರ್ಷ ಫೆ. 8 ಅಲ್ಲದೇ ಏಪ್ರಿಲ್ 11, ಜುಲೈ 11, ಸೆಪ್ಟೆಂಬರ್ 12 ಹಾಗೂ ಡಿಸೆಂಬರ್ 12ಕ್ಕೆ ದೇಶದಾದ್ಯಂತ ಅದಲಾತ್ ನಡೆಯಲಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚೆಕ್ ಅಮಾನ್ಯ, ಬ್ಯಾಂಕ್ ಪ್ರಕರಣ, ಕಾರ್ಮಿಕ ವಿವಾದ, ವಿದ್ಯುತ್, ನೀರು ಶುಲ್ಕ ವಿವಾದ, ನಿರ್ವಹಣೆ, ಕೌಟುಂಬಿಕ ಪ್ರಕರಣ ಭೂಸ್ವಾಧೀನ ಪ್ರಕರಣ ಕಂದಾಯ ಮುಂತಾದ ವ್ಯಾಜ್ಯಪೂರ್ವ ಮತ್ತು ವ್ಯಾಜ್ಯ ಪ್ರಕರಣಗಳನ್ನು ಇತ್ಯರ್ಥ ಮಾಡಬಹುದು ಎಂದು ವಿವರ ನೀಡಿದರು.
ಒಮ್ಮೆ ರಾಜೀಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಅಪೀಲು ಹೋಗಲು ಅವಕಾಶ ಇಲ್ಲ. ವ್ಯಾಜ್ಯ ಪೂರ್ವ ಪ್ರಕರಣಗಳಿಗೆ ನ್ಯಾಯಾಲಯದ ಶುಲ್ಕ ಕೊಡಬೇಕಾಗಿಲ್ಲ. ಬಡವರಿಗೆ ಕೆಲವು ವ್ಯಾಜ್ಯಗಳಲ್ಲಿ ವಕೀಲರನ್ನು ಒದಗಿಸುವುದು, ದಾಖಲೆ ಒದಗಿಸಲು ಸಹಕರಿಸುವುದು ಸಹಿತ ಕೆಲವು ಸೌಲಭ್ಯ ದೊರೆಯುತ್ತದೆ ಎಂದು ತಿಳಿಸಿದರು.
ಡಿಸೆಂಬರ್14ರಂದು ನಡೆದಿದ್ದ ಲೋಕ ಅದಾಲತ್ನಲ್ಲಿ 3,490 ಪ್ರಕರಣಗಳನ್ನು ಶಿಫಾರಸು ಮಾಡಲಾಗಿತ್ತು. ಅದರಲ್ಲಿ 678 ಪ್ರಕರಣಗಳು ಇತ್ಯರ್ಥಗೊಂಡಿದ್ದವು. ಕಕ್ಷಿದಾರರಿಗೆ ₹ 7.34 ಕೋಟಿ ಪರಿಹಾರ ಕೊಡಿಸಲಾಗಿತ್ತು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್, ‘ಲೋಕ ಅದಾಲತ್ಗೆ ವಕೀಲರ ಸಂಘದ ಸಹಕಾರ ಇದೆ. ಇಲ್ಲದೇ ಇದ್ದರೆ ಪ್ರಕರಣಗಳು ರಾಜೀಯಲ್ಲಿ ಇತ್ಯರ್ಥ ಮಾಡಲು ಆಗುವುದಿಲ್ಲ’ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್. ಬಡಿಗೇರ್, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್ಕುಮಾರ್ ಇದ್ದರು.
ಜಿಲ್ಲೆಯಲ್ಲಿ ಡಿಸೆಂಬರ್ ಅಂತ್ಯಕ್ಕೆ ಬಾಕಿ ಇರುವ ಸಿವಿಲ್ ಪ್ರಕರಣ15,891
ಡಿಸೆಂಬರ್ ಅಂತ್ಯಕ್ಕೆ ಬಾಕಿ ಇರುವ ಕ್ರಿಮಿನಲ್ ಪ್ರಕರಣ 14,528
ಈ ಬಾರಿ ರಾಜೀಯಲ್ಲಿ ಇತ್ಯರ್ಥಗೊಳಿಸಲು ಇಟ್ಟುಕೊಂಡಿರುವ ಗುರಿ1,000
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.