ಹರಿಹರ:ಮಠಗಳು ಜನಸಾಮನ್ಯರ ಕಷ್ಟ ನಿವಾರಣೆಗೆ ಸ್ಥಾಪನೆಯಾಗಿವೆ. ಕೋವಿಡ್ ಸಂಕಷ್ಟದ ಕಾಲದಲ್ಲಿ ಸರ್ಕಾರದ ಜತೆ ಕೈಜೋಡಿಸಲು ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಚನ್ನಗಿರಿ ತಾಲ್ಲೂಕಿನ ವಡ್ನಾಳಿನ ಸಾವಿತ್ರಿ ಪೀಠದ ಶಂಕರಾತ್ಮಾನಂದ ಸ್ವಾಮೀಜಿ ಹೇಳಿದರು.
ನಗರದ ಮರಿಯಾ ಸದನದಲ್ಲಿ ವಿಶ್ವಕರ್ಮ ಸಮಾದ ವಡ್ನಾಳ್ ಸಾವಿತ್ರಿ ಪೀಠ ಹಾಗೂ ತಾಲ್ಲೂಕು ವಿಶ್ವಕರ್ಮ ಸಮಾಜ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಕೋವಿಡ್ ಲಸಿಕಾ ಅಭಿಯಾನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶ್ರೀ ಪೀಠದ ಭಕ್ತರ ಸಹಕಾರದಿಂದ =ಲಸಿಕೆ ನೀಡಲಾಗುತ್ತಿದೆ. ಯಾವುದೇ ಜಾತಿ-ಧರ್ಮಗಳ ಭೇದವಿಲ್ಲದೇ, ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಚನ್ನಗಿರಿ ತಾಲ್ಲೂಕಿನಲ್ಲಿ ಅಭಿಯಾನ ಯಶಸ್ವಿಯಾದ ಕಾರಣ ವಿವಿಧ ತಾಲ್ಲೂಕಿನ ಭಕ್ತರ ಬೇಡಿಕೆಯಂತೆ ತಾಲ್ಲೂಕಿನಲ್ಲಿ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ‘ವಿಶ್ವಕರ್ಮ ಸಮಾಜದ ಸಾವಿತ್ರಿ ಪೀಠ ಸದಾ ಎಲ್ಲಾ ಸಮಾಜದ ಪ್ರತಿವ್ಯಕ್ತಿಯ ಒಳಿತಿಗಾಗಿ ಸದಾ ಪ್ರಯತ್ನಿಸುತ್ತಿರುವುದು ಶ್ಲಾಘನೀಯ. ತಾಲ್ಲೂಕಿನಲ್ಲಿ ವಿಶ್ವಕರ್ಮ ಸಮಾಜ ಕಡಿಮೆ ಜನಸಂಖ್ಯೆ ಹೊಂದಿರುವ ಶ್ರಮಿಕರ ವರ್ಗ. ಆದರೂ ಶ್ರೀಪೀಠದ ಸಹಕಾರದೊಂದಿಗೆ ಇತರೆ ಸಮಾಜದ ನೋವಿಗೆ ಸ್ಪಂದಿಸುತ್ತಿರುವುದು ಅಭಿನಂದನಾರ್ಹ’ ಎಂದರು.
ರಾಜಕಾರಣಿಗಳು ಲಸಿಕೆ ಅಭಿಯಾನ ನಡೆಸಿದರೇ ತಮ್ಮ ರಾಜಕೀಯ ಲಾಭಕ್ಕಾಗಿ ಎಂಬ ಭಾವನೆ ಮೂಡುತ್ತದೆ. ಶ್ರೀ ಪೀಠಗಳು ಜನಪರ ಕಾರ್ಯಗಳು ನಡೆಸುವುದರಿಂದ ಸಮಾಜದಲ್ಲಿ ಉತ್ತಮ ಸ್ಪಂದನ ದೊರೆಯುತ್ತದೆ ಎಂದರು.
ಸರ್ಕಾರ, ಲಸಿಕೆ ಅಭಿಯಾನದಲ್ಲಿ ಸಂಪೂರ್ಣ ವಿಫಲವಾಗಿದೆ. ತಾಲ್ಲೂಕಿನಲ್ಲಿ ಶೇ 35ರಷ್ಟು ಕಾರ್ಯ ನಡೆದಿದೆ. ಇಂತಹ ಸಂದರ್ಭದಲ್ಲಿ ಪೀಠದ ಅಭಿಯಾನ ಜನಮಾನಸದಲ್ಲಿ ಸದಾ ಹಸಿರಾಗಿರುತ್ತದೆ ಎಂದರು.
ಧರ್ಮಗುರು ಫಾದರ್ ಆಂಥೋನಿ ಪೀಟರ್ ಮಾತನಾಡಿ, ‘ಲಸಿಕಾ ಅಭಿಯಾನದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಜನಾಂಗದವರು ಭಾಗವಹಿಸಿ ಲಸಿಕೆಯನ್ನು ಪಡೆಯುತ್ತಿರುವುದು ಸಾವಿತ್ರಿ ಪೀಠ ಜನರ ಆರೋಗ್ಯದ ಕಾಳಜಿಯನ್ನು ತೋರಿಸುತ್ತದೆ’ ಎಂದರು.
3 ಸಾವಿರಕ್ಕೂ ಹೆಚ್ಚು ಜನರು ಕೋವಿಶೀಲ್ಡ್ ಲಸಿಕೆ ಪಡೆದರು.
ವಡ್ನಾಳ್ ಮಠದ ಅಧ್ಯಕ್ಷ ಮಹೇಂದ್ರಾಚಾರ್, ಕಾರ್ಯದರ್ಶಿ ಬೆನಕಪ್ಪಚಾರ್, ಉಪಾಧ್ಯಕ್ಷ ಹೇಮಾಚಾರ್, ತಾಲ್ಲೂಕು ಅಧ್ಯಕ್ಷ ಎಸ್. ರುದ್ರಾಚಾರ್, ಉಪಾಧ್ಯಕ್ಷೆ ಲಕ್ಷ್ಮೀಆಚಾರ್, ಆರೋಗ್ಯರಕ್ಷಾ ಸಮಿತಿ ಸದಸ್ಯ ವೀರೇಶ್ ಆಚಾರ್ ಹಾಗೂ ಸಮಾಜದವರು ಭಾಗವಹಿಸಿದ್ದರು.