ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಿಸಿ ಪಟ್ಟಿಗೆ ಲಿಂಗಾಯತ ಸಮುದಾಯ: ಶಿಫಾರಸು ಮಾಡೋದರಲ್ಲಿ ರಾಜಕೀಯ ಬೇಡ; ಶಾಮನೂರು

ಕೇಂದ್ರದ ಒಬಿಸಿ ಪಟ್ಟಿಗೆ ವೀರಶೈವ‌ ಲಿಂಗಾಯತ ಸಮುದಾಯ ಸೇರಿಸಿ
Published 15 ಜನವರಿ 2024, 20:41 IST
Last Updated 15 ಜನವರಿ 2024, 20:41 IST
ಅಕ್ಷರ ಗಾತ್ರ

ಹರಿಹರ (ದಾವಣಗೆರೆ): ‘ರಾಜ್ಯ ಸರ್ಕಾರ ರಾಜಕೀಯ ಮಾಡದೇ ವೀರಶೈವ‌ ಲಿಂಗಾಯತ ಸಮುದಾಯದ ಎಲ್ಲರನ್ನೂ ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಸ್ಸು ಮಾಡಬೇಕು’ ಎಂದು ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕೋರಿದರು.

ಇಲ್ಲಿನ ಪಂಚಮಸಾಲಿ ಗುರುಪೀಠದಲ್ಲಿ ನಡೆದ ಹರಜಾತ್ರೆಯಲ್ಲಿ ಭಾಗವಹಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.

‘ವೀರಶೈವ-ಲಿಂಗಾಯತ ಸಮುದಾಯದವರು ಬೇರೆ ಬೇರೆ ಅಲ್ಲ ಎಲ್ಲರೂ ಒಂದೇ. ವೀರಶೈವ ಲಿಂಗಾಯತರು ಒಳ‌ಪಂಗಡಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ಎಲ್ಲ ವೀರಶೈವ ಲಿಂಗಾಯತರು ಒಂದೇ ಎಂದು ಭಾವಿಸಬೇಕು. ಸಮಾಜದ ಬಡ ಮಕ್ಕಳಿಗೆ ಶಿಕ್ಷಣ, ಉದ್ಯೋಗಕ್ಕೆ ಅನುಕೂಲ ಆಗುವ ದೃಷ್ಟಿಯಿಂದ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಇತ್ತೀಚಿಗೆ ಪಂಚಮಸಾಲಿ ಸಮಾಜ ಹೆಚ್ಚು ಬೆಳವಣಿಗೆ ಹೊಂದುತ್ತಿರುವುದು ಸಂತಸದ ವಿಚಾರ’ ಎಂದರು.

ಹರಿಹರ ಪಂಚಮಸಾಲಿ ಗುರು ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ‘ವೀರಶೈವ– ಲಿಂಗಾಯತ ಸಮುದಾಯದಲ್ಲಿ ಕೆಲವರು 2ಎ, 3ಎ, 3ಬಿ ಮೀಸಲಾತಿ ಪಡೆಯುತ್ತಿದ್ದು, ಇದು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವಂತಾಗಿದೆ. ರಾಜ್ಯದಲ್ಲಿರುವ ಎಲ್ಲಾ ವೀರಶೈವ ಲಿಂಗಾಯತ ಸಮುದಾಯಕ್ಕೆ ಒಂದೇ ರೀತಿಯ ಮೀಸಲಾತಿ‌ ಇರಬೇಕು’ ಎಂದು ಅಭಿಪ್ರಾಯಪಟ್ಟರು.

‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೇಳುತ್ತಿದ್ದೇವೆ. ಸಮಾಜವನ್ನು ಒಡೆಯುವುದಿಲ್ಲ. ಜಾಗೃತಿ ಮೂಡಿಸುತ್ತಿದ್ದೇವೆ. ಬಸವರಾಜ ಬೊಮ್ಮಯಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಪ್ರಕಟಿಸಿರುವ ಮೀಸಲಾತಿಯನ್ನು ವಿರೋಧಿಸಿಲ್ಲ. ಅದನ್ನು  ಸ್ವಾಗತಿಸಿಯೂ ಇಲ್ಲ. ನಾವು ಅಗತ್ಯ ಕಾನೂನು ಹೋರಾಟ ಮಾಡುತ್ತಿದ್ದೇವೆ. ಈ ವಿಚಾರ ಕುರಿತು ಪ್ರಚಾರ ಪಡೆದರೆ ಮೀಸಲಾತಿ ಸಿಗುವುದಿಲ್ಲ’ ಎಂದರು.

‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಟಿಕೆಟ್ ಹಂಚಿಕೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಆದ್ಯತೆ ನೀಡಬೇಕು’ ಎಂದು ಅವರು ಆಗ್ರಹಿಸಿದರು.

ಹರಿಹರ ತಾಲ್ಲೂಕಿನ ಹನಗವಾಡಿಯ ಪಂಚಮಸಾಲಿ ಗುರುಪೀಠದಲ್ಲಿ ಸೋಮವಾರ ಬರಗಾಲದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾದ ಹರಜಾತ್ರೆಯ ಸಂದರ್ಭ ನಡೆದ ಅಕ್ಕಮಹಾದೇವಿ ವಚನಗಳ ಪಲ್ಲಕ್ಕಿ ಉತ್ಸವದಲ್ಲಿ ವಚನಾನಂದ ಸ್ವಾಮೀಜಿ ಜಮಖಂಡಿ ಅಲಗೂರು ಗುರುಪೀಠದ ಶ್ರೀಗಳು ಹಾಗೂ ಸಮುದಾಯದ ಮುಖಂಡರು ಇದ್ದರು.
ಹರಿಹರ ತಾಲ್ಲೂಕಿನ ಹನಗವಾಡಿಯ ಪಂಚಮಸಾಲಿ ಗುರುಪೀಠದಲ್ಲಿ ಸೋಮವಾರ ಬರಗಾಲದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾದ ಹರಜಾತ್ರೆಯ ಸಂದರ್ಭ ನಡೆದ ಅಕ್ಕಮಹಾದೇವಿ ವಚನಗಳ ಪಲ್ಲಕ್ಕಿ ಉತ್ಸವದಲ್ಲಿ ವಚನಾನಂದ ಸ್ವಾಮೀಜಿ ಜಮಖಂಡಿ ಅಲಗೂರು ಗುರುಪೀಠದ ಶ್ರೀಗಳು ಹಾಗೂ ಸಮುದಾಯದ ಮುಖಂಡರು ಇದ್ದರು.
ವೀರಶೈವ ಲಿಂಗಾಯತರೆಲ್ಲರೂ ಹಿಂದೂಗಳು. 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸಂದರ್ಭ ವೀರಶೈವ ಲಿಂಗಾಯತ ಸಮುದಾಯದ ಎಲ್ಲರೂ ಅಂದು ರಾಮನವಮಿ ಎಂದೇ ಭಾವಿಸಿ ಪೂಜೆ ಸಲ್ಲಿಸಬೇಕು.
–ವಚನಾನಂದ ಸ್ವಾಮೀಜಿ ಹರಿಹರ ಪಂಚಮಸಾಲಿ ಗುರುಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT