<p><strong>ಆನಗೋಡು (ದಾವಣಗೆರೆ):</strong> ದಾವಣಗೆರೆ–ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗದ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದ್ದು, ತಾಲ್ಲೂಕಿನ ಹೆಬ್ಬಾಳ ಗ್ರಾಮದವರೆಗೆ ಹಳಿ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ತೋಳಹುಣಸೆ–ಆನುಗೋಡು ನಡುವೆ ಜುಲೈನಿಂದ ಪ್ಯಾಸೆಂಜರ್ ರೈಲು ಓಡಿಸುವ ಆಲೋಚನೆ ಇದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.</p><p>ತಾಲ್ಲೂಕಿನ ಆನಗೋಡು ರೈಲು ನಿಲ್ದಾಣದಲ್ಲಿ ಗುರುವಾರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.</p><p>‘ನೇರ ರೈಲು ಮಾರ್ಗ 2027ರ ಡಿಸೆಂಬರ್ಗೆ ಸೇವೆಗೆ ಲಭ್ಯವಾಗಲಿದೆ. ಈಗಾಗಲೇ ನಿರ್ಮಾಣವಾಗಿರುವ ಹಳಿಯ ಮೇಲೆ ರೈಲು ಸಂಚರಿಸದೇ ಇದ್ದರೆ ತೊಂದರೆ ಆಗುತ್ತದೆ. ಕಾಮಗಾರಿ ಪೂರ್ಣಗೊಂಡ ಪ್ರಮುಖ ಸ್ಥಳಗಳ ನಡುವಿನ ಪ್ರತಿ 20 ಕಿ.ಮೀಗೆ ಒಂದು ಪ್ಯಾಸೆಂಜರ್ ರೈಲು ಓಡಿಸಲಾಗುವುದು’ ಎಂದರು.</p><p>‘ರೈಲ್ವೆ ಇಲಾಖೆಯ ತಾಂತ್ರಿಕ ಪರಿಣತರ ತಂಡ ಹಳಿಯನ್ನು ಪರಿಶೀಲಿಸಲಿದೆ. ಆ ಬಳಿಕ ರೈಲು ಸಂಚಾರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ನಿರ್ಮಾಣವಾಗಿರುವ ರೈಲು ನಿಲ್ದಾಣಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವ ಸವಾಲು ಎದುರಾಗಿದೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳುವ ಹೊಣೆಗಾರಿಕೆ ರೈಲ್ವೆ ಸಂರಕ್ಷಣಾ ಪಡೆ (ಆರ್ಪಿಎಫ್) ಮೇಲಿದೆ’ ಎಂದರು.</p><p>‘ನೇರ ರೈಲು ಮಾರ್ಗ ಯೋಜನೆಗೆ 2,406 ಎಕರೆ ಭೂಮಿಯ ಅಗತ್ಯವಿದೆ. ತುಮಕೂರು ಹಾಗೂ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ದಾವಣಗೆರೆ ತಾಲ್ಲೂಕಿನ ತೋಳಹುಣಸೆ ಬಳಿ 17 ಎಕರೆ 3 ಗುಂಟೆ ಹಾಗೂ ಆನುಗೋಡು–ಹೆಬ್ಬಾಳ ನಡುವೆ 12 ಎಕರೆ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇದೆ. ಇದನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ರೈಲ್ವೆ ಇಲಾಖೆಗೆ ಹಸ್ತಾಂತರಿಸಿ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ಸೂಚಿಸಿದರು.</p><p>‘ನೇರ ರೈಲು ಮಾರ್ಗವು ಮುಂಬೈವರೆಗಿನ ಕೈಗಾರಿಕಾ ಕಾರಿಡಾರ್ನ ಪ್ರಮುಖ ಭಾಗವಾಗುತ್ತಿದೆ. ಭವಿಷ್ಯದಲ್ಲಿ ಈ ಮಾರ್ಗದ ಭೂಮಿಗೆ ಹೆಚ್ಚಿನ ಬೆಲೆ ಬರಲಿದೆ. ರೈತರು ಆಮಿಷಗಳಿಗೆ ಬಲಿಯಾಗಿ ಭೂಮಿ ಕಳೆದುಕೊಳ್ಳಬಾರದು. ಕಾಮಗಾರಿ ನಡೆಯುವ ಸ್ಥಳದಲ್ಲಿ ಸ್ಥಳೀಯರು ತೊಂದರೆ ನೀಡಬಾರದು. ಸಿಬ್ಬಂದಿ, ಅಧಿಕಾರಿಗಳ ಮೇಲೆ ಹಲ್ಲೆ ಮಾಡುವುದು ತಪ್ಪು. ಇಂತಹ ಕೃತ್ಯಗಳನ್ನು ಸಹಿಸಿಕೊಳ್ಳುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.</p><p>ಬಿಜೆಪಿ ಮುಖಂಡ ಜಿ.ಎಸ್.ಅನಿತ್ಕುಮಾರ್, ರೈಲ್ವೆ ಇಲಾಖೆಯ ಮುಖ್ಯ ಎಂಜಿನಿಯರ್ ಪ್ರದೀಪ್ ಪೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಹಾಜರಿದ್ದರು.</p>.<div><blockquote>ಆನಗೋಡು ರೈಲು ನಿಲ್ದಾಣ ಮುಂದೊಂದು ದಿನ ಜಂಕ್ಷನ್ ಆಗಲಿದೆ. ಹೊಳಲ್ಕೆರೆ ಮತ್ತು ವಿಜಯನಗರ ಜಿಲ್ಲೆಗೆ ಸಂಪರ್ಕ ಕಲ್ಪಿಸಲಿದೆ. ಈ ನಿಲ್ದಾಣವನ್ನು ಮೇಲ್ದರ್ಗೆ ಏರಿಸುವ ಅಗತ್ಯವಿದೆ.</blockquote><span class="attribution">ಕೆ.ಎಸ್.ಬಸವಂತಪ್ಪ, ಶಾಸಕ ಮಾಯಗೊಂಡ</span></div>.<h2>ಟ್ರಾಲಿಯಲ್ಲಿ ಸಂಚರಿಸಿದ ಸಚಿವ</h2><p>ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಮೋಟಾರು ಚಾಲಿತ ಟ್ರಾಲಿಯಲ್ಲಿ ಹಳಿಯ ಮೇಲೆ ಸಾಗುವ ಮೂಲಕ ಕಾಮಗಾರಿ ಪರಿಶೀಲಿಸಿದರು. ನೇರ ರೈಲು ಮಾರ್ಗದ ತೋಳಹುಣಸೆ–ಹೆಬ್ಬಾಳದ ನಡುವೆ ನಡೆದ 25 ಕಿ.ಮೀ ಹಳಿ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.</p><p>‘ಬೆಳಿಗ್ಗೆ 6.15ಕ್ಕೆ ಬೆಂಗಳೂರಿನಿಂದ ರೈಲಿನಲ್ಲಿ ಹೊರಟು 11ಕ್ಕೆ ದಾವಣಗೆರೆ ತಲುಪಿದೆ. ರೈಲು ಪ್ರಯಾಣಿಕರು ಅನುಭವಿಸುವ ಸಂಕಷ್ಟವನ್ನು ಗಮನಿಸಿದೆ. ನೇರ ರೈಲು ಮಾರ್ಗ ನಿರ್ಮಾಣವಾದರೆ ಬೆಂಗಳೂರು–ದಾವಣಗೆರೆ ನಡುವಿನ ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆ ಆಗಲಿದೆ’ ಎಂದರು.</p>.<h2>ಸಂಸದೆ ಡಾ.ಪ್ರಭಾ ಬೇಡಿಕೆಗಳು</h2><p>* ದಾವಣಗೆರೆಯ ಲಿಂಗೇಶ್ವರ ದೇಗುಲದ ಬಳಿಯ ರೈಲು ಹಳಿ ಪಕ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಿಸಬೇಕು.</p><p>* ಬೆಂಗಳೂರು–ಮುಂಬೈ ಸೂಪರ್ ಫಾಸ್ಟ್ ರೈಲು ದಾವಣಗೆರೆ ಮಾರ್ಗವಾಗಿ ಸಂಚರಿಸಿದರೆ ಅನುಕೂಲ.</p><p>* ತೋಳಹುಣಸೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅಂಡರ್ಪಾಸ್ ನಿರ್ಮಿಸಬೇಕು.</p><p>* ದಾವಣಗೆರೆ ರೈಲ್ವೆ ಪ್ಲಾಟ್ಫಾರ್ಮ್ನಲ್ಲಿ ಶೌಚಾಲಯ ಸೇರಿ ಮೂಲಸೌಲಭ್ಯ ಕಲ್ಪಿಸಬೇಕು.</p><p>* ವಂದೇ ಭಾರತ್ ರೈಲು ಸಂಚಾರದ ಸಮಯ ಬದಲಾವಣೆ ಆಗಬೇಕು.</p><p>* ಹರಿಹರ ರೈಲು ನಿಲ್ದಾಣದ ಬಳಿ ಅಪಘಾತಗಳು ಹೆಚ್ಚುತ್ತಿವೆ. ಮೇಲ್ಸೇತುವೆ ಅಥವಾ ತಂತಿ ಬೇಲಿ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ನಡೆಯಬೇಕು.</p>
<p><strong>ಆನಗೋಡು (ದಾವಣಗೆರೆ):</strong> ದಾವಣಗೆರೆ–ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗದ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದ್ದು, ತಾಲ್ಲೂಕಿನ ಹೆಬ್ಬಾಳ ಗ್ರಾಮದವರೆಗೆ ಹಳಿ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ತೋಳಹುಣಸೆ–ಆನುಗೋಡು ನಡುವೆ ಜುಲೈನಿಂದ ಪ್ಯಾಸೆಂಜರ್ ರೈಲು ಓಡಿಸುವ ಆಲೋಚನೆ ಇದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.</p><p>ತಾಲ್ಲೂಕಿನ ಆನಗೋಡು ರೈಲು ನಿಲ್ದಾಣದಲ್ಲಿ ಗುರುವಾರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.</p><p>‘ನೇರ ರೈಲು ಮಾರ್ಗ 2027ರ ಡಿಸೆಂಬರ್ಗೆ ಸೇವೆಗೆ ಲಭ್ಯವಾಗಲಿದೆ. ಈಗಾಗಲೇ ನಿರ್ಮಾಣವಾಗಿರುವ ಹಳಿಯ ಮೇಲೆ ರೈಲು ಸಂಚರಿಸದೇ ಇದ್ದರೆ ತೊಂದರೆ ಆಗುತ್ತದೆ. ಕಾಮಗಾರಿ ಪೂರ್ಣಗೊಂಡ ಪ್ರಮುಖ ಸ್ಥಳಗಳ ನಡುವಿನ ಪ್ರತಿ 20 ಕಿ.ಮೀಗೆ ಒಂದು ಪ್ಯಾಸೆಂಜರ್ ರೈಲು ಓಡಿಸಲಾಗುವುದು’ ಎಂದರು.</p><p>‘ರೈಲ್ವೆ ಇಲಾಖೆಯ ತಾಂತ್ರಿಕ ಪರಿಣತರ ತಂಡ ಹಳಿಯನ್ನು ಪರಿಶೀಲಿಸಲಿದೆ. ಆ ಬಳಿಕ ರೈಲು ಸಂಚಾರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ನಿರ್ಮಾಣವಾಗಿರುವ ರೈಲು ನಿಲ್ದಾಣಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವ ಸವಾಲು ಎದುರಾಗಿದೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳುವ ಹೊಣೆಗಾರಿಕೆ ರೈಲ್ವೆ ಸಂರಕ್ಷಣಾ ಪಡೆ (ಆರ್ಪಿಎಫ್) ಮೇಲಿದೆ’ ಎಂದರು.</p><p>‘ನೇರ ರೈಲು ಮಾರ್ಗ ಯೋಜನೆಗೆ 2,406 ಎಕರೆ ಭೂಮಿಯ ಅಗತ್ಯವಿದೆ. ತುಮಕೂರು ಹಾಗೂ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ದಾವಣಗೆರೆ ತಾಲ್ಲೂಕಿನ ತೋಳಹುಣಸೆ ಬಳಿ 17 ಎಕರೆ 3 ಗುಂಟೆ ಹಾಗೂ ಆನುಗೋಡು–ಹೆಬ್ಬಾಳ ನಡುವೆ 12 ಎಕರೆ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇದೆ. ಇದನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ರೈಲ್ವೆ ಇಲಾಖೆಗೆ ಹಸ್ತಾಂತರಿಸಿ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ಸೂಚಿಸಿದರು.</p><p>‘ನೇರ ರೈಲು ಮಾರ್ಗವು ಮುಂಬೈವರೆಗಿನ ಕೈಗಾರಿಕಾ ಕಾರಿಡಾರ್ನ ಪ್ರಮುಖ ಭಾಗವಾಗುತ್ತಿದೆ. ಭವಿಷ್ಯದಲ್ಲಿ ಈ ಮಾರ್ಗದ ಭೂಮಿಗೆ ಹೆಚ್ಚಿನ ಬೆಲೆ ಬರಲಿದೆ. ರೈತರು ಆಮಿಷಗಳಿಗೆ ಬಲಿಯಾಗಿ ಭೂಮಿ ಕಳೆದುಕೊಳ್ಳಬಾರದು. ಕಾಮಗಾರಿ ನಡೆಯುವ ಸ್ಥಳದಲ್ಲಿ ಸ್ಥಳೀಯರು ತೊಂದರೆ ನೀಡಬಾರದು. ಸಿಬ್ಬಂದಿ, ಅಧಿಕಾರಿಗಳ ಮೇಲೆ ಹಲ್ಲೆ ಮಾಡುವುದು ತಪ್ಪು. ಇಂತಹ ಕೃತ್ಯಗಳನ್ನು ಸಹಿಸಿಕೊಳ್ಳುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.</p><p>ಬಿಜೆಪಿ ಮುಖಂಡ ಜಿ.ಎಸ್.ಅನಿತ್ಕುಮಾರ್, ರೈಲ್ವೆ ಇಲಾಖೆಯ ಮುಖ್ಯ ಎಂಜಿನಿಯರ್ ಪ್ರದೀಪ್ ಪೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಹಾಜರಿದ್ದರು.</p>.<div><blockquote>ಆನಗೋಡು ರೈಲು ನಿಲ್ದಾಣ ಮುಂದೊಂದು ದಿನ ಜಂಕ್ಷನ್ ಆಗಲಿದೆ. ಹೊಳಲ್ಕೆರೆ ಮತ್ತು ವಿಜಯನಗರ ಜಿಲ್ಲೆಗೆ ಸಂಪರ್ಕ ಕಲ್ಪಿಸಲಿದೆ. ಈ ನಿಲ್ದಾಣವನ್ನು ಮೇಲ್ದರ್ಗೆ ಏರಿಸುವ ಅಗತ್ಯವಿದೆ.</blockquote><span class="attribution">ಕೆ.ಎಸ್.ಬಸವಂತಪ್ಪ, ಶಾಸಕ ಮಾಯಗೊಂಡ</span></div>.<h2>ಟ್ರಾಲಿಯಲ್ಲಿ ಸಂಚರಿಸಿದ ಸಚಿವ</h2><p>ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಮೋಟಾರು ಚಾಲಿತ ಟ್ರಾಲಿಯಲ್ಲಿ ಹಳಿಯ ಮೇಲೆ ಸಾಗುವ ಮೂಲಕ ಕಾಮಗಾರಿ ಪರಿಶೀಲಿಸಿದರು. ನೇರ ರೈಲು ಮಾರ್ಗದ ತೋಳಹುಣಸೆ–ಹೆಬ್ಬಾಳದ ನಡುವೆ ನಡೆದ 25 ಕಿ.ಮೀ ಹಳಿ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.</p><p>‘ಬೆಳಿಗ್ಗೆ 6.15ಕ್ಕೆ ಬೆಂಗಳೂರಿನಿಂದ ರೈಲಿನಲ್ಲಿ ಹೊರಟು 11ಕ್ಕೆ ದಾವಣಗೆರೆ ತಲುಪಿದೆ. ರೈಲು ಪ್ರಯಾಣಿಕರು ಅನುಭವಿಸುವ ಸಂಕಷ್ಟವನ್ನು ಗಮನಿಸಿದೆ. ನೇರ ರೈಲು ಮಾರ್ಗ ನಿರ್ಮಾಣವಾದರೆ ಬೆಂಗಳೂರು–ದಾವಣಗೆರೆ ನಡುವಿನ ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆ ಆಗಲಿದೆ’ ಎಂದರು.</p>.<h2>ಸಂಸದೆ ಡಾ.ಪ್ರಭಾ ಬೇಡಿಕೆಗಳು</h2><p>* ದಾವಣಗೆರೆಯ ಲಿಂಗೇಶ್ವರ ದೇಗುಲದ ಬಳಿಯ ರೈಲು ಹಳಿ ಪಕ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಿಸಬೇಕು.</p><p>* ಬೆಂಗಳೂರು–ಮುಂಬೈ ಸೂಪರ್ ಫಾಸ್ಟ್ ರೈಲು ದಾವಣಗೆರೆ ಮಾರ್ಗವಾಗಿ ಸಂಚರಿಸಿದರೆ ಅನುಕೂಲ.</p><p>* ತೋಳಹುಣಸೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅಂಡರ್ಪಾಸ್ ನಿರ್ಮಿಸಬೇಕು.</p><p>* ದಾವಣಗೆರೆ ರೈಲ್ವೆ ಪ್ಲಾಟ್ಫಾರ್ಮ್ನಲ್ಲಿ ಶೌಚಾಲಯ ಸೇರಿ ಮೂಲಸೌಲಭ್ಯ ಕಲ್ಪಿಸಬೇಕು.</p><p>* ವಂದೇ ಭಾರತ್ ರೈಲು ಸಂಚಾರದ ಸಮಯ ಬದಲಾವಣೆ ಆಗಬೇಕು.</p><p>* ಹರಿಹರ ರೈಲು ನಿಲ್ದಾಣದ ಬಳಿ ಅಪಘಾತಗಳು ಹೆಚ್ಚುತ್ತಿವೆ. ಮೇಲ್ಸೇತುವೆ ಅಥವಾ ತಂತಿ ಬೇಲಿ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ನಡೆಯಬೇಕು.</p>