ಚನ್ನಗಿರಿ: ತಾಲ್ಲೂಕಿನ ಹಿರೇಮಳಲಿ ಗ್ರಾಮದ ಬಳಿ ಭದ್ರಾ ಎಡದಂಡೆ ನಾಲೆ ಹಾದು ಹೋಗಿದ್ದು, 6 ಕಿ.ಮೀ. ಉದ್ದದ ಸುರಂಗದಿಂದ ನೀರು ರಭಸವಾಗಿ ಹರಿದು ಹೊರಗೆ ಬರುವ ದೃಶ್ಯ ಅತ್ಯಂತ ರಮಣೀಯವಾಗಿದೆ. ಈ ನಾಲೆಯ ಎರಡೂ ಬದಿಯಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ.
ಗುರುರಾಜಪುರ ಗ್ರಾಮದ ಬಳಿ ಪ್ರಾರಂಭವಾಗುವ ಸುರಂಗ ಹಿರೇಮಳಲಿ ಗ್ರಾಮದ ಬಳಿ ಕೊನೆಗೊಳ್ಳುತ್ತದೆ. ನಾಲ್ಕೈದು ಗ್ರಾಮಗಳ ಮೂಲಕ ಈ ಸುರಂಗ ಹಾದು ಹೋಗಿದ್ದು, ಸುರಂಗ ನಾಲೆ ಗ್ರಾಮದೊಳಗೆ ಹಾದು ಹೋಗಿದೆ ಎಂಬುದು ಗೊತ್ತಾಗದಂತೆ ಸುರಂಗವನ್ನು ಮುಚ್ಚಲಾಗಿದೆ.
ನಾಲೆಯ ಉದ್ದಕ್ಕೂ ಎರಡು ಬದಿಯಲ್ಲಿ ಗಿಡಗಂಟೆಗಳು ಬೆಳೆದು ನಿಂತಿರುವುದರಿಂದ ನಾಲೆಯ ತಡೆಗೋಡೆಗೆ ಗಿಡಗಂಟೆಗಳ ಬೇರುಗಳು ಇಳಿದು ಬಿರುಕು ಬಿಡುವ ಸಂಭವ ಇದೆ.
ಭದ್ರಾ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿಯನ್ನು ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೈಗೊಳ್ಳಲಾಗಿತ್ತು. ಆಗ ನಾಲೆ ಬದಿಯ ಗಿಡಗಂಟೆಗಳನ್ನು ತೆಗೆಯಲಾಗಿತ್ತು. ಈಗಾಗಲೇ ಕಾಮಗಾರಿ ಕೈಗೊಂಡು 15 ವರ್ಷಗಳಾಗಿವೆ. ಆ ಬಳಿಕ ಯಾವ ಸರ್ಕಾರವೂ ನಾಲೆಯ ಆಧುನೀಕರಣ ಕಾಮಗಾರಿಯನ್ನು ಕೈಗೆತ್ತಿ ಕೊಂಡಿಲ್ಲ.
ನೀರಾವರಿ ಇಲಾಖೆಯ ಅಧಿಕಾರಿಗಳು ಭದ್ರಾ ನಾಲೆಯ ಎರಡೂ ಬದಿಯಲ್ಲಿ ಬೆಳೆದು ನಿಂತಿರುವ ಗಿಡಗಂಟೆಗಳನ್ನು ತೆಗೆಯಿಸಲು ಮುಂದಾಗಬೇಕು ಎನ್ನುತ್ತಾರೆ ಹಿರೇಮಳಲಿ ಗ್ರಾಮದ ರೈತರಾದ ಓಂಕಾರಪ್ಪ.
ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಗಿಡಗಂಟೆಗಳನ್ನು ತೆಗೆಯಿಸಲು ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ಬಿಡುಗಡೆಯಾದರೆ ಗಿಡಗಂಟೆಗಳನ್ನು ತೆಗೆಯಿಸಲಾಗುವುದು ಎಂದು ನೀರಾವರಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಶ್ ತಿಳಿಸಿದರು.