ದಾವಣಗೆರೆ: ಮಹಾನಗರ ಪಾಲಿಕೆ ವತಿಯಿಂದ ನಗರದಲ್ಲಿ ಕಾಡು ನಿರ್ಮಾಣ ಮಾಡುವ ಯೋಜನೆಯಡಿ ಶಾಮನೂರು ಡಾಲರ್ಸ್ ಕಾಲೊನಿಯ ಉದ್ಯಾನದಲ್ಲಿ ಭಾನುವಾರ ಒಂದು ಸಾವಿರ ಸಸಿಗಳನ್ನು ನೆಡಲಾಗಿದೆ.
ಮೇಯರ್ ಎಸ್.ಟಿ. ವೀರೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಅಯೋಜನೆ ಮಾಡಲಾಗಿದೆ. ಕಡಿಮೆ ಪ್ರದೇಶದಲ್ಲಿ ಹೆಚ್ಚು ಗಿಡ ನೆಡುವ ಮಿಯವಾಕಿ ಪದ್ಧತಿಯಲ್ಲಿ 60 ಸಾವಿರ ಗಿಡಗಳನ್ನು ನೆಡುವ ಗುರಿ ಇಟ್ಟುಕೊಂಡಿದ್ದೇವೆ. ಈಗಾಗಲೇ ಡಿಎಸ್ಎಂ ಟೌನ್ಶಿಪ್ ಬಳಿ ವಿನಾಯಕ ನಗರದಲ್ಲಿ ಮತ್ತು ಸರ್ಕೀಟ್ ಹೌಸ್ ಸಮೀಪದ ಪಂಪ್ಹೌಸ್ ಬಳಿ ಸಸಿಗಳನ್ನು ನೆಡಲಾಗಿದೆ. ಈಗ ಶಾಮನೂರಿನ ಡಾಲರ್ಸ್ ಕಾಲೊನಿಯಲ್ಲಿ ಒಂದು ಸಾವಿರ ಸಸಿಗಳನ್ನು ನೆಟ್ಟಿದ್ದೇವೆ’ ಎಂದು ಹೇಳಿದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸಿದ್ದಲ್ಲಿ ಪರಿಸರವನ್ನು ಕಾಪಾಡಿದಂತೆ ಆಗುತ್ತದೆ. ಅಷ್ಟೇ ಅಲ್ಲದೆ ನಮ್ಮ ಮುಂದಿನ ಪೀಳಿಗೆಗೆ ಉಳಿಸುವ ಪ್ರಯತ್ನವಾಗಿದೆ. ಡಾಲರ್ಸ್ ಕಾಲೊನಿಯಲ್ಲಿ ಇವತ್ತು 20 ಜಾತಿಯ ಗಿಡಗಳನ್ನು ನೆಡಲಾಗಿದೆ ಎಂದರು.
ಉಪ ಮೇಯರ್ ಶಿಲ್ಪ ಜಯಪ್ರಕಾಶ್, ಆಯುಕ್ತ ವಿಶ್ವನಾಥ ಪಿ. ಮುದಜ್ಜಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಪ್ರಕಾಶ್, ಸದಸ್ಯರಾದ ಕಲ್ಲಹಳ್ಳಿ ನಾಗರಾಜ್, ಯಶೋದಾ ಯಗ್ಗಪ್ಪ, ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.