ದಾವಣಗೆರೆ: ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬ ಕಳೆಗಟ್ಟಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಹಬ್ಬದ ಮುನ್ನ ದಿನ ಎಳ್ಳು, ಬೆಲ್ಲ, ಕಬ್ಬು, ಹೂವುಗಳ ಖರೀದಿ ಜೋರಾಗಿತ್ತು.
ಚಾಮರಾಜಪೇಟೆ, ಮಂಡಿಪೇಟೆ, ಹದಡಿ ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಚರ್ಚ್ರೋಡ್, ಬಿಐಇಟಿ ಕಾಲೇಜ್ ರಸ್ತೆ, ಸಿಜೆ ಆಸ್ಪತ್ರೆ ಬಳಿ ಕಬ್ಬನ್ನು ಗ್ರಾಹಕರು ತೆಗೆದುಕೊಂಡು ಹೋಗುತ್ತಿದ್ದು ಕಂಡು ಬಂತು. ಹಲವರು ಎಳ್ಳು, ಬೆಲ್ಲ, ಜೀರಿಗೆ ಸೇರಿ ಮನೆಗೆ ಬೇಕಾದ ದಿನಸಿ ಪದಾರ್ಥಗಳನ್ನು ಕಟ್ಟಿಸಿಕೊಳ್ಳುತ್ತಿದ್ದರು.
ಎಳ್ಳು- ಬೆಲ್ಲ, ಅವರೆಕಾಯಿ, ಕಡಲೆಕಾಯಿ, ಗೆಣಸು, ಕಬ್ಬನ್ನು ಹೆಚ್ಚು ಖರೀದಿಸುವುದರಿಂದ ಅವುಗಳ ಬೆಲೆ ಗಗನಕ್ಕೆ ಏರಿತ್ತು. ತಮಿಳುನಾಡು, ಮಂಡ್ಯ, ಹಾಸನ ಮತ್ತಿತರ ಕಡೆಗಳಿಂದ ಕಬ್ಬು ಬಂದಿದ್ದು, ದರ ತುಸು ಹೆಚ್ಚಾದರೂ ಗ್ರಾಹಕರು ಕಬ್ಬನ್ನು ಖರೀದಿಸಿದರು.
ಸಂಕ್ರಾಂತಿ ಹಬ್ಬದಂದು ಮನೆಯಲ್ಲಿ ಹೋಳಿಗೆ ಸಿಹಿ ಊಟ ಮಾಡುವುದು ವಾಡಿಕೆ. ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಭಕ್ತರು ನದಿ, ಕೆರೆಗಳಿಗೆ ತೆರಳಿ ಪುಣ್ಯಸ್ನಾನ ಮಾಡಲಿದ್ದಾರೆ. ಹಬ್ಬದ ಊಟವನ್ನು ಸಿದ್ಧಪಡಿಸಿಕೊಂಡು ಬುತ್ತಿ ಕಟ್ಟಿಕೊಂಡು ಸಂಬಂಧಿಕರೆಲ್ಲ ಉದ್ಯಾನ, ಕೆರೆ, ಆನಗೋಡು ಪ್ರಾಣಿ ಸಂಗ್ರಹಾಲಯಕ್ಕೆ ತೆರಳಿ ಒಟ್ಟಿಗೆ ಕುಳಿತು ಭೋಜನ ಮಾಡಲಿದ್ದಾರೆ.
ಜಿಲ್ಲೆಯಲ್ಲಿ ಅಯ್ಯಪ್ಪ ಭಕ್ತರು ಮಾಲೆ ಧರಿಸಿದ್ದು, ಸಂಕ್ರಾಂತಿ ಹಬ್ಬದ ದಿವಸ ಜ್ಯೋತಿ ನೋಡಲು ಶಬರಿಮಲೆಗೆ ಧಾವಿಸುತ್ತಾರೆ. ಅಲ್ಲಿ ಅಯ್ಯಪ್ಪ ದರ್ಶನ ಮಾಡಿ, ಮತ್ತೆ ಹಿಂದಿರುಗುವುದು ವಿಶೇಷ.