ಹೊನ್ನಾಳಿ: ‘ಜಿ.ಬಿ.ವಿನಯಕುಮಾರ್ ಅವರಿಗೆ ಬಿಜೆಪಿಯವರು ಕರೆತಂದು ದುಡ್ಡುಕೊಟ್ಟು ಚುನಾವಣೆಗೆ ನಿಲ್ಲಿಸಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಶಾಮನೂರು ಕುಟುಂಬದವರದ್ದು, ಅದನ್ನು ಅವರು ಸಿಎಂ ಬಾಯಿಯಲ್ಲಿ ಹೇಳಿಸಿದ್ದಾರೆ’ ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ಹೇಳಿದರು.
ಸೋಮವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಾನು ದುಡ್ಡು ಮಾಡಲು ಚುನಾವಣೆಗೆ ನಿಂತಿಲ್ಲ, ನಾನು ಸ್ವಾಭಿಮಾನದ ಹೋರಾಟವನ್ನು ಕೈಗೆತ್ತಿಕೊಂಡಿದ್ದು, ಜನಶಕ್ತಿಯನ್ನು ನಂಬಿದ್ದೇನೆ’ ಎಂದು ಹೇಳಿದರು.
‘ನಾನು ಈ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಬಂದಿದ್ದೇನೆ. ದಾವಣಗೆರೆಯ ಎರಡೂ ಕುಟುಂಬಗಳ ದೌರ್ಬಲ್ಯವನ್ನು ಗುರುತಿಸಿದ್ದೇನೆ. ಕ್ಷೇತ್ರದಲ್ಲಿ ನನ್ನ ಪರ ಅಲೆ ಇದೆ. ನಾನು ಗೆಲ್ಲುತ್ತೇನೆ ಎಂದು ತಿಳಿದು ಈ ರೀತಿಯ ಆರೋಪವನ್ನು ಸಿದ್ದರಾಮಯ್ಯ ಕಡೆಯಿಂದ ಮಾಡಿಸಿದ್ದಾರೆ’ ಎಂದು ಅವರು ದೂರಿದರು.
ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಲಿದ್ದೇನೆ ಎಂದರು. ನೂರಾರು ಜನ ಬೆಂಬಲಿಗರು ಹಾಜರಿದ್ದರು.