ದಾವಣಗೆರೆ: ಪರೀಕ್ಷೆಗಾಗಿ ಕಳುಹಿಸಿದ ಸ್ಯಾಂಪಲ್ಗಳ (ಮಾದರಿಗಳು) ಫಲಿತಾಂಶ ಬರುವುದು ವಿಳಂಬವಾಗುತ್ತಿದೆ. ಶೀಘ್ರವಾಗಿ ವರದಿ ಬರುವಂತೆ ಮಾಡಲು ಜಿಲ್ಲೆಗೊಂದು ವಿಧಿವಿಜ್ಞಾನ ಪ್ರಯೋಗಾಲಯ ಆರಂಭಿಸಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್ ಹೇಳಿದರು.
ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಕರ್ತರಿಗೆ ಈ ವಿಷಯ ತಿಳಿಸಿದರು.
‘ಕಡಿಮೆ ಪ್ರಯೋಗಾಲಯಗಳು ಇರುವುದರಿಂದ ಸ್ಯಾಂಪಲ್ಗಳ ಫಲಿತಾಂಶ ಒಂದು, ಎರಡು ವರ್ಷಗಳ ನಂತರ ಬರುತ್ತಿವೆ. 15 ದಿವಸ, ಗರಿಷ್ಠ ಮೂರು ತಿಂಗಳಿಗೆ ಫಲಿತಾಂಶ ಬರಬೇಕಾದರೆ ಜಿಲ್ಲೆಗೊಂದು ಪ್ರಯೋಗಾಲಯ ಆಗಬೇಕು. ವಿಧಿವಿಧಾನ ಪ್ರಯೋಗಾಲಯ ವ್ಯವಸ್ಥೆಯನ್ನು ಸಬಲೀಕರಗೊಳಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ’ ಎಂದರು.
‘ಮರಳು ಅಕ್ರಮ ಸಾಗಣೆ, ಅಕ್ರಮ ಕ್ಲಬ್, ಕ್ವಾರಿಗಳ ಮೇಲೆ ನಿಗಾ ಇಟ್ಟು ಸೂಕ್ತ ಕ್ರಮ ಕೈಗೊಳ್ಳಲು ಈಗಾಗಲೇ ನಿರ್ದೇಶನ ನೀಡಲಾಗಿದೆ. ಡ್ರಗ್ಸ್ ವಿಚಾರದಲ್ಲಿ 10 ವರ್ಷಗಳ ಕೆಲಸವನ್ನು ನಮ್ಮ ಪೊಲೀಸರು ಒಂದೇ ವರ್ಷಕ್ಕೆ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.