ದಾವಣಗೆರೆ: 6ನೇ ವೇತನ ಜಾರಿಗೊಳಿಸುವಂತೆ ಆಗ್ರಹಿಸಿ ಕೆಎಸ್ಆರ್ಟಿಸಿ ನೌಕರರು ನಡೆಸುತ್ತಿರುವ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದೆ. ತಿಂಗಳ ಎರಡನೇ ಶನಿವಾರ, ಯುಗಾದಿ ಹಬ್ಬದ ಪ್ರಯಕ್ತ ಹೊರಗಿನಿಂದ ಪ್ರಯಾಣಿಕರು ದಾವಣಗೆರೆ ಬರುತ್ತಿದ್ದರು.
ದಾವಣಗೆರೆಯಿಂದ ಹರಿಹರ, ರಾಣೆಬೆನ್ನೂರು ಹಾಗೂ ಚಿತ್ರದುರ್ಗ ಮಾರ್ಗವಾಗಿ 21 ಟ್ರಿಪ್ಗಳು ಸಂಚರಿಸಿದವು. ದೂರದ ಊರುಗಳಿಗೆ ಪ್ರಯಾಣಿಕರು ಹೆಚ್ಚಾಗಿ ಖಾಸಗಿ ಬಸ್ಗಳನ್ನೇ ಅವಲಂಬಿಸಿದ್ದರು.
ಐದು ಮಂದಿ ವರ್ಗಾವಣೆ:
‘ಶನಿವಾರ ಮತ್ತೆ 5 ನೌಕರರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅವರಲ್ಲಿ ಮೂರು ಮಂದಿ ತಾಂತ್ರಿಕ ಸಿಬ್ಬಂದಿ ಇದ್ದಾರೆ.ಶುಕ್ರವಾರ 14 ಮಂದಿ ನೌಕರರನ್ನು ವರ್ಗಾವಣೆ ಮಾಡಲಾಗಿತ್ತು. ಒಟ್ಟು 19 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ’ ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್.ಹೆಬ್ಬಾಳ್ ಹೇಳಿದರು.
‘ಮುಷ್ಕರದ ನಿಮಿತ್ತ ಕೆಎಸ್ಆರ್ಟಿಸಿ ದಾವಣಗೆರೆ ವಿಭಾಗಕ್ಕೆ 4 ದಿನಗಳಿಂದ ₹1.40 ಕೋಟಿ ನಷ್ಟವಾಗಿದೆ’ ಎಂದು ಹೇಳಿದರು.
ಕುಟುಂಬ ಸಮೇತ ಪ್ರತಿಭಟನೆ:6ನೇ ವೇತನ ಜಾರಿಗೊಳಿಸುವಂತೆ ಆಗ್ರಹಿಸಿ ಕೆಎಸ್ಆರ್ಟಿಸಿ ನೌಕರರು ಏಪ್ರಿಲ್ 12ರಂದು ಕುಟುಂಬದವರ ಜೊತೆ ಪ್ರತಿಭಟನೆ ನಡೆಸಲಿದ್ದಾರೆ.
‘ಬಸ್ ನಿಲ್ದಾಣ ಹಾಗೂ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಬೇರೆ ಸ್ಥಳದಲ್ಲಿ ಪ್ರತಿಭಟನೆ ನಡೆಸಲಾಗುವುದು. ಕೋವಿಡ್ ಕಾರಣದಿಂದಾಗಿ ಕಾರಣದಿಂದ 50ರಿಂದ 60 ಜನ ಮಾತ್ರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು’ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.