ದಾವಣಗೆರೆ: ‘ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಹರಿಹರ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತೇನೆ. ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತೇನೆ. ಭದ್ರಾ ಜಲಾಶಯದ ನೀರು ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಭಾಗಕ್ಕೂ ಹರಿಯುವಂತೆ ಮಾಡುತ್ತೇನೆ’ ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಭರವಸೆ ನೀಡಿದರು.
ಹರಿಹರ ತಾಲೂಕಿನ ಭಾನುವಳ್ಳಿ, ಮಲೇಬೆನ್ನೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಬುಧವಾರ ಮತಯಾಚನೆ ಮಾಡಿದರು.
ಭಾನುವಳ್ಳಿ ಗ್ರಾಮದಲ್ಲಿ ಮಾತನಾಡಿ ‘ಹರಿಹರ ತಾಲೂಕಿನಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಈ ಬಾರಿ ಗ್ಯಾಸ್ ಸಿಲಿಂಡರ್ ಗುರುತಿಗೆ ಮತ ನೀಡಿ ಗೆಲ್ಲಿಸಿ. ಸಂಸದರು ಹೇಗೆ ಕೆಲಸ ಮಾಡಬೇಕು ಎಂಬುದನ್ನು ನಾನು ತೋರಿಸುತ್ತೇನೆ’ ಎಂದು ಹೇಳಿದರು.
‘ಕ್ಷೇತ್ರ ವ್ಯಾಪ್ತಿಯಲ್ಲಿನ ದೇವಾಲಯಗಳ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ಪ್ರವಾಸೋದ್ಯಮದ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವಂತಾಗಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಗ್ರಾಮದ ವಿ.ನಾಗರಾಜ್, ಎಂ. ಮಾಂತೇಶ್, ಬಿ.ಎನ್. ಕರಿಯಪ್ಪ, ಬಿ. ಮಹಾದೇವಪ್ಪ, ಬಿ. ಚಂದ್ರಪ್ಪ, ಎಚ್. ಸುರೇಶ್, ಎ. ಲೋಕೇಶ್, ಜೋಗಪ್ಪರ ಸುರೇಶ, ಕೋಲ್ಕರ್ ನಾಗಪ್ಪ, ನಾಗರಾಜ ಶಿಕಾರಿಪುರ ಮತ್ತಿತರರು ಹಾಜರಿದ್ದರು.
ಮಲೇಬೆನ್ನೂರಿನಲ್ಲಿ ರೋಡ್ ಶೋ: ಮಲೇಬೆನ್ನೂರಿನಲ್ಲಿ ನಡೆಸಿದ ರೋಡ್ ಶೋಗೆ ಭಾರೀ ಬೆಂಬಲ ವ್ಯಕ್ತವಾಯಿತು.
‘ಕಳೆದ 30 ವರ್ಷಗಳಿಂದ ಅಧಿಕಾರ ನಡೆಸಿದವರು ಭದ್ರಾ ಅಚ್ಚುಕಟ್ಟು ಭಾಗದ ರೈತರ ಹಿತ ಕಾಪಾಡಲೇ ಇಲ್ಲ. ಭದ್ರಾ ಜಲಾಶಯದ ನೀರು ತರಲು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಎರಡು ನದಿಗಳ ನೀರು ಬಂದರೂ ಜನರಿಗೆ ನೀರಿನ ಬವಣೆ ತಪ್ಪಿಲ್ಲ. ನಾನು ಗೆದ್ದರೆ ತಾಲೂಕಿನಲ್ಲಿ ನೀರಾವರಿ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡುವ ಜೊತೆಗೆ ಕಾರ್ಯಗತಗೊಳಿಸಲು ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.