ದಾವಣಗೆರೆ: ಭದ್ರಾ ಅಚ್ಚುಕಟ್ಟು ಪ್ರದೇಶದ ದಾವಣಗೆರೆ ವಿಭಾಗದ ವಿವಿಧ ಹಳ್ಳಿಗಳಿಗೆ ನೀರು ಬಿಡುಗಡೆಯಾಗಿ 8 ದಿವಸವಾದರೂ ನೀರು ತಲುಪಿಲ್ಲ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಭಾರತೀಯ ರೈತ ಒಕ್ಕೂಟ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ಬುಧವಾರ ಮನವಿ ಸಲ್ಲಿಸಿತು.
ದಾವಣಗೆರೆ ವಿಭಾಗದ ಹಳ್ಳಿಗಳಾದ ಶಿರಮಗೊಂಡನಹಳ್ಳಿ, ನಾಗನೂರು, ಬೆಳವನೂರು, ಶಾಮನೂರು, ಬಿಸಲೇರಿ, ಜರೇಕಟ್ಟೆ ಹಾಗೂ ಹರಿಹರ ಡಿವಿಜನ್ 1ಕ್ಕೆ ನೀರು ಬಿಡುಗಡೆಯಾಗಿ 8 ದಿವಸಗಳಾದರೂ ತೋಟ ಹಾಗೂ ದನಕರುಗಳಿಗೆ ಕುಡಿಯಲು ನೀರು ತಲುಪಿಲ್ಲ. ಕುರ್ಕಿ ಗ್ರಾಮದ ಹತ್ತಿರ ಕಲ್ಪನಹಳ್ಳಿ ಕಡೆಗೆ ಹೋಗುವ ಚಾನಲ್ಗೆ ಅಕ್ರಮವಾಗಿ ಗೇಟ್ ಎತ್ತಿರುವುದರಿಂದ ನೀರು ತಲುಪಿಲ್ಲ. ಇನ್ನೂ 4 ದಿನ ಮಾತ್ರ ನೀರು ಹರಿಯಲಿದ್ದು, ಅಷ್ಟರೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡರಾದ ಎಚ್.ಆರ್.ಲಿಂಗಾರಾಜ್ ಇದ್ದರು.
Cut-off box - ಭದ್ರಾ ಕಾಲುವೆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ದಾವಣಗೆರೆ: ಭದ್ರಾ ಜಲಾಶಯದಿಂದ ಬಲದಂಡೆ ಕಾಲುವೆಗೆ ನೀರು ಬಿಡಲಾಗಿದ್ದು ಕೊನೆ ಹಂತದ ರೈತರಿಗೆ ನೀರು ತಲುಪಿಸಲು ಅನಧಿಕೃತ ಪಂಪ್ಸೆಟ್ ತೆರವು ಮಾಡಲಾಗುತ್ತಿದೆ. ಈ ಅವಧಿಯಲ್ಲಿ ಸಾರ್ವಜನಿಕ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡಲು ಮಾರ್ಚ್ 28 ಮಧ್ಯಾಹ್ನ 2ಗಂಟೆಯವರೆಗೆ ಮಾಯಾಕೊಂಡ ಹೋಬಳಿ ನಲ್ಕುಂದ ಬಳಿ ತಾಲ್ಲೂಕು ಗಡಿಯಿಂದ ಕುರ್ಕಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ಭದ್ರಾ ಕಾಲುವೆಗಳ ಸುತ್ತಮುತ್ತ ಬಲ ಮತ್ತು ಎಡಬಾಗದಿಂದ 200 ಮೀಟರ್ವರೆಗಿನ ಪ್ರದೇಶದ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ತಹಶೀಲ್ದಾರ್ ಅಶ್ವಥ್.ಎಂ.ಬಿ ಆದೇಶಿಸಿರುತ್ತಾರೆ. ‘ಈ ಅವಧಿಯಲ್ಲಿ ಮಾರಕಾಸ್ತ್ರ ಆಯುಧಗಳನ್ನು ತೆಗೆದುಕೊಂಡು ಹೋಗುವುದು ಗುಂಪು ಸೇರುವುದು ಮಾಡುವಂತಿಲ್ಲ. ಯಾರಾದರೂ ಕಾನೂನು ಉಲ್ಲಂಘನೆ ಮಾಡಿದಲ್ಲಿ ಕ್ರಮ ಜರುಗಿಸಲಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.
ಏ.3ರವರೆಗೆ ಸೂಳೆಕೆರೆ ಹಳ್ಳಕ್ಕೆ ನೀರು
ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28ರಿಂದ ಏಪ್ರಿಲ್ 3ರವರೆಗೆ ಪ್ರತಿದಿನ 20 ಕ್ಯೂಸೆಕ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ. ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.