ಹರಪನಹಳ್ಳಿ: ಕನ್ನಡ ಸಾಹಿತ್ಯ ಪರಿಷತ್ ಜಾತಿ, ಧರ್ಮ, ಪಂಥಕ್ಕೆ ಸೀಮಿತವಾಗದೇ ಸರ್ವ ಜನಾಂಗದ ಶಾಂತಿಯ ತೋಟವಾಗಿಸುವ ನಿಟ್ಟಿನಲ್ಲಿ ಕನ್ನಡದ ಮನಸುಗಳನ್ನು ಕಟ್ಟುವ ಕೆಲಸವಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ ಹೇಳಿದರು.
ಪಟ್ಟಣದ ಜೂನಿಯರ್ ಕಾಲೇಜಿನ ಸಭಾಂಗಣದಲ್ಲಿ ಪರಿಷತ್ ತಾಲ್ಲೂಕು ಸಮಿತಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಪರಿಷತ್ ಸದೃಢ ಸಂಸ್ಥೆ. ತಾಲ್ಲೂಕು ಮಟ್ಟದಲ್ಲಿ ಆಯ್ಕೆಯಾಗುವ ಪದಾಧಿಕಾರಿಗಳು ಕೆಲಸ ಕಡಿಮೆ ಮಾಡಿದರೂ ಪರವಾಗಿಲ್ಲ. ಆದರೆ ಪರಿಣಾಮಕಾರಿ ಕೆಲಸ ಮಾಡಬೇಕು. ಸೃನಜಶೀಲ, ಚಿಂತನಾಶೀಲ ಸಾಹಿತ್ಯದ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಗುಂಪು, ಪಂಥಗಳಿಗೆ ಸೀಮಿತವಾಗಿ ಕೆಲಸ ಮಾಡದೇ ಕನ್ನಡ ಪಂಥಕ್ಕಾಗಿ ಕೆಲಸ ಮಾಡಬೇಕು. ಈ ಬಾರಿ ರಾಜ್ಯ ಸಮಿತಿ ಬೈಲಾ ತಿದ್ದುಪಡಿ ಮಾಡುವ ವಿಶ್ವಾಸವಿದೆ ಎಂದರು.
ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಂಟು ಜನರು ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿದ ಜಿಲ್ಲಾಧ್ಯಕ್ಷರು, ಶೀಘ್ರ ಅಧ್ಯಕ್ಷರ ಆಯ್ಕೆ ಘೋಷಣೆ ಮಾಡುವುದಾಗಿ ತಿಳಿಸಿದರು.
ತಾಲ್ಲೂಕು ಸಮಿತಿ ನಿಕಟಪೂರ್ವ ಅಧ್ಯಕ್ಷ ಡಿ.ರಾಮನಮಲಿ, ಮಾಜಿ ಅಧ್ಯಕ್ಷ ಎಚ್. ಮಲ್ಲಿಕಾರ್ಜುನ್ ಮಾತನಾಡಿದರು. ಮಾಜಿ ಅಧ್ಯಕ್ಷ ಬಿ.ರಾಮಪ್ರಸಾದ ಗಾಂಧಿ, ಮಾಳ್ಗಿ ಮಂಜುನಾಥ್, ಮೋರಿಗೇರಿ ಹೇಮಣ್ಣ ಇದ್ದರು.