ಮಲೇಬೆನ್ನೂರು: ಸಮೀಪದ ನಿಟ್ಟೂರು ಕ್ಯಾಂಪ್ನಲ್ಲಿರುವ ಆಂಜನೇಯ ಟ್ರೇಡರ್ಸ್ನಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿದ್ದ 51 ಟನ್ ಬಿಪಿಟಿ 5204 ಮಾದರಿ ಭತ್ತದ ಬೀಜವನ್ನು ಕೃಷಿ ಆಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ನಿಜಾಮಬಾದ್ನ ಸೂಪರ್ ಸೀಡ್ಸ್ ಕಂಪೆನಿ ಲೇಬಲ್ ಇದ್ದು 25 ಕಿಲೋ ತೂಗುವ 2040 ಚೀಲಗಳನ್ನು ಗೋದಾಮಿನಲ್ಲಿ ಅಕ್ರಮವಾಗಿ ಮಾರಾಟ ಮಾಡಲು ದಾಸ್ತಾನು ಮಾಡಿದ್ದರು.
ಖಚಿತ ಮಾಹಿತಿಯೊಡನೆ ದಾಳಿ ನಡೆಸಿದ ವೇಳೆ ಪರಿಶೀಲನೆ ಮಾಡಿದಾಗ ಮಾರಾಟಗಾರನ ಬಳಿ ಬೀಜ ಮಾರಾಟ ಮಾಡುವ ಪರವಾನಗಿ ಇರಲಿಲ್ಲ.
ಅಂಗಡಿ ಮಾಲೀಕ ಹರಿರಾವ್ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು.
ಸೂಕ್ತ ದಾಖಲೆ ಒದಗಿಸದ ಕಾರಣ ಅಧಿಕಾರಿಗಳು ಗೋದಾಮಿಗೆ ಬೀಗ ಮುದ್ರೆ ಹಾಕಿದರು. ವಶಪಡಿಸಿಕೊಂಡ ಬೀಜದ ಮೌಲ್ಯ ₨ 16.32 ಲಕ್ಷ ಎಂದು ಅಧಿಕಾರಿಗಳು ತಿಳಿಸಿದರು.
ಸಹಾಯಕ ಕೃಷಿ ಅಧಿಕಾರಿ ಮಹದೇವ ಸರಶೆಟ್ಟಿ, ಹೇಮಣ್ಣ, ಹಂಪಣ್ಣ ಪಾಲ್ಗೊಂಡಿದ್ದರು.