ಚನ್ನಗಿರಿ: ತಾಲ್ಲೂಕು ಕಾಕನೂರು ಗ್ರಾಮದಲ್ಲಿರುವ ಸರ್ಕಾರಿ ಗೋಮಾಳದಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗದ ಬಡವರಿಗೆ ಬಗರ್ಹುಕುಂ ಸಾಗುವಾಳಿ ಮಾಡಲು ಜಮೀನು ನೀಡಬೇಕೆಂದು ಒತ್ತಾಯಿಸಿ ಸೋಮವಾರ ಪಟ್ಟಣದ ತಾಲ್ಲೂಕು ಕಚೇರಿಯ ಮುಂದೆ ಕಾಕನೂರು ಗ್ರಾಮದ ಜೀತ ವಿಮುಕ್ತಿ ಸಂಘ ಉಪವಾಸ ಸತ್ಯಾಗ್ರಹ ನಡೆಸಿತು.
ಸುಮಾರು 40-50 ವರ್ಷಗಳಿಂದ ಗ್ರಾಮದ ಗೋಮಾಳದಲ್ಲಿ 119 ಜನ ಪರಿಶಿಷ್ಟ ಜಾತಿ ಹಾಗೂ ವರ್ಗದ ಬಡವರು ಬಗರ್ಹುಕುಂ ಸಾಗುವಾಳಿ ಮಾಡುತ್ತಿದ್ದು, ನ್ಯಾಯಾಲಯದ ಆದೇಶ ಇದೆ ಎಂದು ಹೇಳಿ ಒಕ್ಕಲೆಬ್ಬಿಸಿದ್ದಾರೆ. ಇದರಿಂದ ದಲಿತ ಕುಟುಂಬಗಳು ಬೀದಿಗೆ ಬರುವಂತಾಗಿದೆ. ಬಗರ್ಹುಕುಂ ಸಾಗುವಳಿ ಮಾಡಲು ಅವಕಾಶ ಮಾಡಿಕೊಡಬೇಕೆಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ಇಂದಿನಿಂದ ತಾಲ್ಲೂಕು ಕಚೇರಿಯ ಮುಂದೆ ಸರದಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದೇವೆ. ನ್ಯಾಯ ದೊರಕುವವರೆಗೆ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಸಂಚಾಲಕ ದೇವೇಂದ್ರಪ್ಪ ತಿಳಿಸಿದರು.
ಕಾಕನೂರು ಗ್ರಾಮದ ಗೋಮಾಳವನ್ನು ಜಾನುವಾರುಗಳು ಮೇಯಲು ಕಾಯ್ದಿರಿಸಬೇಕು. ಇಲ್ಲಿ ಸಾಗುವಳಿ ಮಾಡುವವರನ್ನು ಸಾಗುವಳಿ ಮಾಡಲು ಬಿಡಬಾರದು. ಪ್ರಾಣಿಗಳು ಮೇಯಲು ಗೋಮಾಳದ ಆವಶ್ಯಕತೆ ಇದೆ ಎಂದು ಹೈಕೋರ್ಟ್ ಆದೇಶದ ಮೇರೆಗೆ ಸಾಗುವಾಳಿ ಮಾಡುವುದನ್ನು ನಿಷೇಧಿಸಲಾಗಿದೆ. ನಮಗೆ ವೈಯುಕ್ತಿಕವಾಗಿ ಯಾರ ಮೇಲೂ ದ್ವೇಷ ಇರುವುದಿಲ್ಲ. ನ್ಯಾಯಾಲಯ ಆದೇಶ ಮಾಡಿದರೆ ಮತ್ತೆ ಬಗರ್ಹುಕುಂ ಮಾಡಲು ಜಮೀನು ನೀಡಲಾಗುವುದು ಎಂದು ತಹಶೀಲ್ದಾರ್ ಎಚ್.ಎಂ. ರೇವಣಸಿದ್ದಪ್ಪ ತಿಳಿಸಿದರು.