ಚನ್ನಗಿರಿ: ಪಟ್ಟಣದ ಕೋಟೆ ಮೇಲಿನ ಬೇಟೆ ಲಕ್ಷ್ಮೀ ರಂಗನಾಥ ಸ್ವಾಮಿ ರಥೋತ್ಸವ ಅಪಾರ ಭಕ್ತರ ಸಮ್ಮಖದಲ್ಲಿ ಶುಕ್ರವಾರ ಸಂಭ್ರಮದಿಂದ ಜರುಗಿತು.ರಥೋತ್ಸವ ಅಂಗವಾಗಿ ಮೂರು ದಿನ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಬುಧವಾರ ಪಂಚಾಮೃತ ಸೇವೆ ಮತ್ತು ಮೃತ್ತಿಕಾ ಸಂಗ್ರಹಣೆ, ಗುರುವಾರ ಪಂಚಾಮೃತ ಅಭಿಷೇಕ, ಅವಿವಾಹಿತ ದೇವತೆಗಳ ಕಳಸ ಸ್ಥಾಪನೆ, ಕಳಸಾರಾಧನೆ, ನವಗ್ರಹ ಪೂಜೆ, ದಿಗ್ಬಲಿ ಹಾಗೂ ಕಲ್ಯಾಣೋತ್ಸವ ಕಾರ್ಯಕ್ರಮಗಳು ನಡೆದವು.
ಶುಕ್ರವಾರ ಬೆಳಿಗ್ಗೆ 5ಕ್ಕೆ ಪುರುಷ ಸೂಕ್ತ ಹೋಮ ಹಾಗೂ ರಥಂಗ ಹೋಮ ಕಾರ್ಯಗಳು ಜರುಗಿದವು. ನಂತರ ಮಧ್ಯಾಹ್ನ 12.30ಕ್ಕೆ ರಥೋತ್ಸವ ಯಶಸ್ವಿಯಾಗಿ ನಡೆಯಿತು. ರಥೋತ್ಸವದ ನಂತರ ಪಾನಕ ಗಾಡಿಗಳಲ್ಲಿ ಪಾನಕ ವಿತರಣೆ ಕಾರ್ಯ ನಡೆಯಿತು. ಒಟ್ಟಾರೆ ಸಂಭ್ರಮ, ಸಡಗರದಿಂದ ರಂಗನಾಥ ಸ್ವಾಮಿ ರಥೋತ್ಸವ ನಡೆಯಿತು.
ದೇಗುಲ ನೆಮ್ಮದಿ ತಾಣ
‘ಜನರಲ್ಲಿ ದೇವರ ಬಗ್ಗೆ ಇತ್ತೀಚಿನ ದಿನಗಳಲ್ಲಿ ನಂಬಿಕೆ ಹೆಚ್ಚಾಗುತ್ತಿದೆ’ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.ಪಟ್ಟಣದ ಈಚೆಗೆ ಕಲ್ಲೇಶ್ವರ ಹಾಗೂ ಚನ್ನಕೇಶವ ಸ್ವಾಮಿ ನೂತನ ದೇವಾಲಯ ಹಾಗೂ ವಿಗ್ರಹಗಳ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಾಚ್ಯವಸ್ತು ಇಲಾಖೆಗೆ ಸೇರಿದ ಹೊಯ್ಸಳ ಕಾಲದ ಈ ದೇಗುಲವನ್ನು ್ಙ 28 ಲಕ್ಷ ವೆಚ್ಚದಲ್ಲಿ ಪುನರ್ ನಿರ್ಮಿಸಲಾಗಿದೆ ಎಂದರು.
ತಹಶೀಲ್ದಾರ್ ಎಚ್.ಎಂ. ರೇವಣಸಿದ್ದಪ್ಪ, ಪ.ಪಂ. ಉಪಾಧ್ಯಕ್ಷ ಕೆ.ಪಿ.ಎಂ. ಶಿವಲಿಂಗಯ್ಯ, ಕೃಷ್ಣ ಉಪಾಧ್ಯ, ಪ.ಪಂ. ಮುಖ್ಯಾಧಿಕಾರಿ ಕೆ. ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು. ಹಾಲಸ್ವಾಮಿ ಮಠದ ಜಯದೇವ ಸ್ವಾಮೀಜಿ ನೇತೃತ್ವ ವಹಿಸಿದ್ದರು.