ಶಿವಮೊಗ್ಗ: ತೀರ್ಥಹಳ್ಳಿಯ ಪ್ರವಾಸಿ ಮಂದಿರದ ಬಳಿ ಮಾವಿನ ಮರವೊಂದನ್ನು ಕಡಿದ ಪರಿಣಾಮ 15 ಬಾವಲಿಗಳು ಮೃತಪಟ್ಟಿವೆ. ಇದರಲ್ಲಿ 10 ಬಾವಲಿ ಮರಿಗಳೇ ಇವೆ.
ಈ ಹಿನ್ನೆಲೆಯಲ್ಲಿ ಭಾನುವಾರ ಪಶು ಸಂಗೋಪನೆ ಇಲಾಖೆಯ ಡಾ.ಸದಾಶಿವ ನೇತೃತ್ವದ ತಂಡ ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಿದರು.
ಮರವನ್ನು ಕಡಿದ ಪರಿಣಾಮ ಅವು ಸತ್ತಿವೆ. ಇವುಗಳಲ್ಲಿ ಮರಿಗಳು ಬಿಸಿಲಿನ ಬೇಗೆಗೆ ಸತ್ತಿವೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಬಾವಲಿ ಪಕ್ಷಿ ಅಲ್ಲ, ಸಸ್ತನಿಯಾಗಿರುವುದರಿಂದ ಹಕ್ಕಿಜ್ವರ ಹರಡುತ್ತದೆ ಎಂಬ ಭೀತಿ ಅಥವಾ ಆತಂಕ ಬೇಡ ಎಂದು ಡಾ. ಸದಾಶಿವ ತಿಳಿಸಿದರು.
ಇಲಾಖೆಯಿಂದ ಬಾವಲಿಗಳು ಮೃತಪಟ್ಟ ಸ್ಥಳಗಳಲ್ಲಿ ಸೋಡಿಯಂ ಹೈಪೋ ಕ್ಲೋರೈಡ್ ಸಿಂಪಡಿಸಲಾಗುತ್ತಿದೆ. ಇದರಿಂದ ವೈರಸ್ ಹರಡದಂತೆ ತಡೆಗಟ್ಟಬಹುದು. ಇವುಗಳ ಮಾದರಿಯನ್ನು ಬೆಂಗಳೂರಿನ ಪ್ರಾಣಿ ಆರೋಗ್ಯ ಮತ್ತು ಜೈವಿಕ ಇಲಾಖೆಯಲ್ಲಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದರು.