ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಅರ್ಥಪೂರ್ಣ ಅಕ್ಷರ ಜಾತ್ರೆ ಇಂದು, ನಾಳೆ

ಕೆ.ಎಸ್‌.ಶರ್ಮಾ ಅವರ ಸರ್ವಾಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನ
ಎಲ್.ಮಂಜುನಾಥ
Published 6 ಮಾರ್ಚ್ 2024, 4:47 IST
Last Updated 6 ಮಾರ್ಚ್ 2024, 4:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳವನ್ನು ಮಾರ್ಚ್‌ 6 ಮತ್ತು 7ರಂದು ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸಲು ಧಾರವಾಡದ ವಿದ್ಯಾಗಿರಿಯ ಜೆಎಸ್‌ಎಸ್‌ ಕಾಲೇಜಿನ ಸನ್ನಿಧಿ ಕಲಾಕ್ಷೇತ್ರವು ಕನ್ನಡ ಬಾವುಟ ಹಾಗೂ ತಳಿರು, ತೋರಣದೊಂದಿಗೆ ಸಿಂಗಾರಗೊಂಡಿದೆ. 

ಸಾಹಿತ್ಯ ಸಮ್ಮೇಳನವನ್ನು ಸರಳ, ಅರ್ಥಪೂರ್ಣವಾಗಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಕಲ ಸಿದ್ಧತೆ ಮಾಡಿಕೊಂಡಿದೆ. ಸಮ್ಮೇಳನಕ್ಕೆ ಬರುವವರನ್ನು ‘ಡಾ.ರಾ.ಯ.ಧಾರವಾಡಕರ ಪ್ರವೇಶದ್ವಾರ’, ‘ಪ್ರೊ.ಸಿ.ವಿ.ಕೆರಿಮನಿ ಮುಖ್ಯದ್ವಾರ’ ಸ್ವಾಗತಿಸುತ್ತವೆ.  ಸಭಾಂಗಣಕ್ಕೆ ’ಡಾ.ನ.ವಜ್ರಕುಮಾರ ಸಭಾಂಗಣ’ ಹೆಸರಿಡಲಾಗಿದೆ. ಮುಖ್ಯ ವೇದಿಕೆಗೆ ’ಪ್ರೊ.ಹಸನಬಿ ಎಂ.ಬೀಳಗಿ ವೇದಿಕೆ’ ಎಂದು ಹೆಸರಿಸಲಾಗಿದೆ.

ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಹಾಗೂ ಕಾಲೇಜುಗಳ ಬೋಧಕರು, ಸಿಬ್ಬಂದಿಗೆ ಕಾರ್ಯನಿಮಿತ್ತ (ಒಒಡಿ) ರಜೆ ವ್ಯವಸ್ಥೆ ಮಾಡಲಾಗಿದೆ. ಸೌಲಭ್ಯ ಬಳಸಿಕೊಂಡು ಶಿಕ್ಷಕರು ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು’ ಎಂದು ಪರಿಷತ್ತಿನ ಅಧ್ಯಕ್ಷ ಲಿಂಗರಾಜ ಅಂಗಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಹಿತ್ಯ ಚಿಂತನೆಗೆ ಆದ್ಯತೆ: ‘ಸಮ್ಮೇಳನದಲ್ಲಿ ಸಾಹಿತ್ಯ ಚಿಂತನಾ ಗೋಷ್ಠಿಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಸಾಹಿತ್ಯ ವೆಂಕಟೇಶ ಮಾಚಕನೂರು, ಸಿದ್ದಲಿಂಗ ಪಟ್ಟಣಶೆಟ್ಟಿ, ಧರಣೇಂದ್ರ ಕುರಕುರಿ, ಶಾಂತಿನಾಥ ದಿಬ್ಬದ, ಶ್ರೀನಿವಾಸ ವಾಡಪ್ಪಿ, ಸುರೇಶ ಕುಲಕರ್ಣಿ ಸೇರಿ ಹಲವು ಸಾಹಿತಿಗಳು ಭಾಗವಹಿಸುವರು’ ಎಂದರು.

ಸಾಹಿತ್ಯ ಸಮ್ಮೇಳನಕ್ಕೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ₹5 ಲಕ್ಷ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ₹1.75ಲಕ್ಷ ಅನುದಾನ ನೀಡಿದೆ. ಇದರಲ್ಲಿಯೇ ಎಲ್ಲವನ್ನೂ ನಿಭಾಯಿಸಬೇಕು.
ಲಿಂಗರಾಜ ಅಂಗಡಿ, ಅಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ

‘ಎರಡು ದಿನ ನಡೆಯುವ ಸಾಹಿತ್ಯ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಸಾಹಿತ್ಯ ಗೋಷ್ಠಿಗಳೊಂದಿಗೆ ಆವರಣದಲ್ಲಿ ಹಿರಿಯ, ಕಿರಿಯ ಸಾಹಿತಿಗಳ ಕನ್ನಡ ಪುಸ್ತಕಗಳ ಪ್ರದರ್ಶನ, ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಯಲಿದೆ’ ಎಂದರು.

ಮತ್ತೆ ಮತ್ತೆ ಓದಬೇಕೆನ್ನುವ ಬೇಂದ್ರೆ....

ನಮ್ಮದು ನಿಮ್ಮದು ಅವರದು ಈ ಆಸ್ತಿ ಪಾಸ್ತಿನಾಡಿನ ತಾಯಿಗೆ ಸೇರಿದೆ ಬೇರೆಯ ಮನೆ ನಾಸ್ತಿಕನ್ನಡ ಕಾಯಕದಲ್ಲಿಲ್ಲವು ಕಮ್ಮೀ ಜಾಸ್ತಿ... ‘ಇದು ದ.ರಾ.ಬೇಂದ್ರೆ ಅವರು ರಚಿಸಿರುವ ‘ಒಂದೇ ಒಂದೇ ಕರ್ನಾಟಕ ಒಂದೇ’ ಪದ್ಯದ ಸಾಲುಗಳು.. ಕರ್ನಾಟಕ ಒಂದೇ ಎನ್ನುವಾಗನಾಡಿನ ಭಾಷೆ ಧಾರ್ಮಿಕ ವೈವಿಧ್ಯತೆಗಳು ಸಹಜ ಸಮನ್ವಯತೆಯ ಸಾಕ್ಷಿಗಳಾಗಬೇಕು. ಬೇಂದ್ರೆಯವರ ಇಂತಹ ನಾಡಿನ ಅಭಿಮಾನ ಸಾಮಾಜಿಕ ಚಿಂತನೆಗಳನ್ನು ಬದುಕಿನುದ್ದಕ್ಕೂ ರೂಢಿಸಿಕೊಂಡು ಬೆಳೆದು ಬಂದವನು ನಾನು’ ಎಂದು ಬೇಂದ್ರೆ ಅವರ ರಚಿಸಿದ ಪದ್ಯವನ್ನು ಹೇಳುವ ಮೂಲಕ ಕೆ.ಎಸ್‌.ಶರ್ಮಾ ’ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನ ಶಿಷ್ಯರೆಲ್ಲರೂ ಸೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದು ನನಗೆ ಸಂತಸ ತಂದಿದೆ. ಬೇಂದ್ರೆಯವರ ಸಾಮಾಜಿಕ ‍ಪರಿವರ್ತನೆಯ ಸಾಹಿತ್ಯವನ್ನು ಮತ್ತೊಮ್ಮೆ ಅನಾವರಣ ಮಾಡಲು ದೊರೆತ ದೊಡ್ಡ ಸುರ್ವಣಾವಕಾಶ’ ಎಂದರು. 

‘ದ.ರಾ.ಬೇಂದ್ರೆ ಅವರೊಂದಿಗೆ 20ಕ್ಕೂ ಹೆಚ್ಚು ವರ್ಷ ಒಡನಾಡಿಯಾಗಿದ್ದೆ. ಅವರ ಸಾಹಿತ್ಯದ ಎಲ್ಲಾ ಮಗ್ಗಲು ಅರಿತಿದ್ದೇನೆ. ಸಾಮಾಜಿಕ ಚಿಂತನೆಯ ಹಿನ್ನೆಲೆಯಲ್ಲಿ ಅವರು ಹಲವಾರು ಕೃತಿ ಕವನಗಳನ್ನು ರಚಿಸಿದ್ದಾರೆ. ಡಾ.ವಾಮನ ಬೇಂದ್ರೆ ನೇತೃತ್ವದ ’ಶ್ರೀಮಾತಾ ಪ್ರಕಾಶನ’ ಮತ್ತು ಡಾ.ದ.ರಾ. ಬೇಂದ್ರೆ ಸಂಶೋಧನಾ ಸಂಸ್ಥೆಯಡಿ ಬೇಂದ್ರೆ ಅವರ ಕೃತಿ ಕವನಗಳನ್ನು ಮರು ಮುದ್ರಣ ಮಾಡುವ ಮೂಲಕ ಅವರನ್ನು ಮತ್ತೆ ಓದುವ ಕಾರ್ಯದಲ್ಲಿ ತೊಡಗಿದ್ದೇನೆ’ ಎಂದು ಹೇಳಿದರು. 

ಉಪ್ಪಿಟ್ಟು ಶಿರಾ ಗೋಧಿ ಹುಗ್ಗಿ ಅನ್ನ ಸಂಬಾರು...

ಸಾಹಿತ್ಯಾಭಿಮಾನಿಗಳ ಊಟದ ಅಭಿರುಚಿ ತಣಿಸಲು ಮಾರ್ಚ್‌ 6ರಂದು ಬೆಳಿಗ್ಗೆ ಶಿರಾ ಉಪ್ಪಿಟ್ಟು ಉಪಾಹಾರ ಇರಲಿದೆ. ಮಧ್ಯಾಹ್ನ ಗೋಧಿ ಹುಗ್ಗಿ ಬದನೆಕಾಯಿ ಪಲ್ಯಾ ಅನ್ನ ಸಂಬಾರು. ಸಂಜೆ 5ಕ್ಕೆ ಮಿರ್ಚಿ ಒಗ್ಗರಣೆ ಮಂಡಕ್ಕಿ. ಮಾರ್ಚ್‌ 7ರಂದು ಬೆಳಿಗ್ಗೆ ಶ್ಯಾವಿಗೆ ಉಪ್ಪಿಟ್ಟು ಬಜಿ. ಮಧ್ಯಾಹ್ನ ಪುಲಾವು ಶಿರಾ. ಸಂಜೆ ಅವಲಕ್ಕಿ ಬಜ್ಜಿ ಇರಲಿದೆ.

ಸಮ್ಮೇಳನದಲ್ಲಿ ಇಂದು...

ಬೆಳಿಗ್ಗೆ 8.30: ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರಿಂದ ರಾಷ್ಟ್ರ ಧ್ವಜಾರೋಹಣ. ಸಾಹಿತಿ ವೆಂಕಟೇಶ ಮಾಚಕನೂರು ಅವರಿಂದ ಕನ್ನಡ ಧ್ವಜಾರೋಹಣ. ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಅವರಿಂದ ಪರಿಷತ್‌ ಧ್ವಜಾರೋಹಣ.  ಬೆಳಿಗ್ಗೆ 9.30: ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ ಅವರಿಂದ ‘ಕನ್ನಡಕ್ಕಾಗಿ ನಡಿಗೆ’ ಮೆರವಣಿಗೆಗೆ ಚಾಲನೆ. ಇದೇ ವೇಳೆ ಸಮ್ಮೇಳನದ ಸರ್ವಾಧ್ಯಕ್ಷರನ್ನು ಮೆರವಣಿಗೆಯ ಮೂಲಕ ಸಭಾಂಗಣದ ವೇದಿಕೆಗೆ ಕರೆತರಲಾಗುವುದು.  10.30: ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಾಹಿತಿ ಧರಣೇಂದ್ರ ಕುರಕುರಿ ಮಾತನಾಡುವರು. ಸಮ್ಮೇಳನದ ಅಧ್ಯಕ್ಷ ಕೆ.ಎಸ್‌.ಶರ್ಮಾ ಮಾತನಾಡುವರು.  ಮಧ್ಯಾಹ್ನ 2: ಸಾಹಿತ್ಯ ಚಿಂತನೆ ಗೋಷ್ಠಿ ನಡೆಯಲಿದೆ. ರಾಘವೇಂದ್ರ ಪಾಟೀಲ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿಗಳು ವಿವಿಧ ಸಾಹಿತ್ಯ ವಿಷಯಗಳ ಕುರಿತು ಮಾತನಾಡುವರು.  ಮಧ್ಯಾಹ್ನ 3.30: ’ಬೇಂದ್ರೆ ಸಾಹಿತ್ಯದ ಒಳನೋಟಗಳು’. ಸಂಜೆ 5ಕ್ಕೆ ’ಇಂದಿನ ಯುವಕರ ಹವ್ಯಾಸಗಳು– ವ್ಯಕ್ತಿತ್ವ’ ಗೋಷ್ಠಿಗಳು ನಡೆಯಲಿವೆ. ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ.

ಸಾಹಿತ್ಯ ಚಟುವಟಿಕೆಯ ಪರಿಚಾರಕ ಶರ್ಮಾ...
ಜಿಲ್ಲೆಯ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಎಸ್‌.ಶರ್ಮಾ ಅವರ ವ್ಯಕ್ತಿತ್ವ ಅಸಮಾನ್ಯವಾದದ್ದು. ಅವರು ಸಾಹಿತ್ಯವಷ್ಟೇ ಅಲ್ಲ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಪರಿಚಯ ಹೀಗಿದೆ. ಕುವಲಯ ಶ್ಯಾಮ ಶರ್ಮಾ (ಕೆ.ಎಸ್‌.ಶರ್ಮಾ) ಅವರು 1934ರ ಸೆಪ್ಟೆಂಬರ್ 30ರಂದು ಎಂಬಾರ್‌ ಭಾಷ್ಯಾಚಾರ್ ಮತ್ತು ಸಂಪತ್ತಮ್ಮಾ ಅವರ ಪುತ್ರರಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಬೆಂಗಳೂರಿನಲ್ಲಿ ಪೂರ್ಣಗೊಳಿಸಿ ನಂತರ ಧಾರವಾಡದಲ್ಲಿ ಪದವಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದರು. ಪಿಎಚ್‌.ಡಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಡೆದರು. ಮಾರ್ಕ್ಸ್‌ವಾದಿಯಾದ ಶರ್ಮಾ ಅವರಿಗೀಗ ವಯಸ್ಸು 90. ಬದುಕಿನ ಬಹುತೇಕ ದಿನಗಳನ್ನು ಅವರು ದ.ರಾ.ಬೇಂದ್ರೆಯವರ ಒಡನಾಡಿಯಾಗಿ ಸಾಹಿತ್ಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಬೇಂದ್ರೆಯವರ ನೂರಾರು ಕವನಗಳನ್ನು ಮರು ಮುದ್ರಣ ಮಾಡಿದ್ದಾರೆ. ಅಧ್ಯಾಪಕ ವಿಮರ್ಶಕ ಸಾಹಿತಿ ಹಾಗೂ ಪ್ರಕಾಶಕರಾಗಿ ಹೀಗೆ ಸಾಹಿತ್ಯ ಕ್ಷೇತ್ರದ ವಿವಿಧ ವಲಯಗಳಲ್ಲಿ ಗುರುತಿಸಿಕೊಂಡಿದ್ದಾರೆ. ಈ ಇಳಿ ವಯಸ್ಸಿನಲ್ಲಿಯೂ ಸಾಹಿತ್ಯದ ಪರಿಚಾರಕರಾಗಿದ್ದಾರೆ. ಇಂಗ್ಲಿಷ್‌ ಭಾಷೆ ರಾಜ್ಯಶಾಸ್ತ್ರ ಕಾನೂನು ಶಾಸ್ತ್ರದ ಅಧ್ಯಾಪಕರಾಗಿ ಹಾಗೂ ಹುಬ್ಬಳ್ಳಿಯ ಜೆಎಸ್‌ಎಸ್‌ ಸಕ್ರಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾಗಿಯೂ ಸೇವೆ ಸೇವೆ ಸಲ್ಲಿಸಿದ್ದಾರೆ. ಸುಮಾರು 24 ವಿವಿಧ ಕಾರ್ಮಿಕ ಸಂಘಗಳ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ಸಾಹಿತ್ಯ ಕೃಷಿ: ಮಾರ್ಕ್ಸ್‌–ಮಾರ್ಕ್ಸ್‌ವಾದ ಲೆನಿನ್‌– ಗಾಂಧಿ ಲೆನಿನ್‌ ವಾದ– ಗಾಂಧಿವಾದ ಮಹಿಳಾ ವಿಮೋಚನೆ ಸಮಾಜವಾದಿ ಮಹಿಳೆ ಚಿಂತನ ಮಂಥನ ಡಾ.ವಾಮನ ಬೇಂದ್ರೆಯವರ ಸಹಯೋಗದಲ್ಲಿ ವರಕವಿ ಡಾ.ದ.ರಾ.ಬೇಂದ್ರೆಯವರ ಕವನ ಸಂಕಲನಗಳ ಹಾಗೂ ಸಮಗ್ರ ಸಾಹಿತ್ಯ ಸಂಪುಟಗಳ ಪ್ರಕಾಶನ ಕಾರ್ಯವನ್ನು ನಡೆಸಿದ್ದಾರೆ. ಇವರದೇ ಅದ ಕಾವ್ಯನಾಮವಾದ ‘ಕುವಲಯ’ ಇದರ ಅಡಿಯಲ್ಲಿ ‘ಕುವಲಯ ಕಾವ್ಯಧಾರೆ ಮಿಂಚುಕಥೆಗಳು ಹರಟೆಗಳು ನಾಟಕಗಳು ಕಂಡ ಅಂದತ್ತ ಕ್ರಾಂತಿ ಜ್ವಾಲೆ ರಾಜ್ಯವ್ಯವಸ್ಥೆ: ಮಾರ್ಕ್ಸ್‌ವಾದಿ ದೃಷ್ಟಿಕೋನ ಪ್ರಬಂಧ ಕುವಲಯ ಚಿಂತನೆಗಳು: ಸಂಪುಟ–1 ಮತ್ತು 2 ಅಂಕಣ ಲೇಖನಗಳ ಸಂಗ್ರಹ. ಕವನ ಸಂಕಲನ ಹತ್ತಾರು ಇಂಗ್ಲಿಷ್‌ ಕೃತಿಗಳನ್ನೂ ಹೊರತಂದಿದ್ದಾರೆ.  ಸಂದ ಗೌರವಗಳು: ‘ಸೋವ್ಹಿಯಟ್‌ ಲ್ಯಾಂಡ್‌ ನೆಹರೂ ಪ್ರಶಸ್ತಿ–1973 (ಸಾಹಿತ್ಯ) ಕೇಂದ್ರ ಸರ್ಕಾರದ ಬಹುಮಾನ ಚಾಲುಕ್ಯ ಪ್ರಶಸ್ತಿ (ಸಮಾಜ ಸೇವೆ) ವಿಶ್ವೇಶ್ವರಯ್ಯ ನವರತ್ನ ಪರಿತೋಷಕ ಕನ್ನಡ ಶ್ರೀ ಕಾರ್ಮಿಕ ರತ್ನ ಹಲವು ಪ್ರಶಸ್ತಿಗಳಿಗೆ ಅವರು ಪಾತ್ರರಾಗಿದ್ದಾರೆ. ಸ್ಥಾಪಿಸಿದ ಸಂಸ್ಥೆ: ಕೆ.ಎಸ್‌.ಶರ್ಮಾ ಔದ್ಯೋಗಿಕ ತರಬೇತಿ ಕೇಂದ್ರ ಕೆ.ಎಸ್‌.ಶರ್ಮಾ ಶಿಶುವಿಹಾರ ಕೆ.ಎಸ್‌.ಶರ್ಮಾ ಪ್ರಾಥಮಿಕ ಶಾಲೆ ಕೆ.ಎಸ್‌.ಶರ್ಮಾ ಕಲ್ಯಾಣ ಸಭಾ ಭವನ ಜ್ಞಾನಪೀಠ ಪ್ರಶಸ್ತಿ ವಿಜೇತ ವರಕವಿ ಡಾ.ದ.ರಾ.ಬೇಂದ್ರೆ ಸಂಶೋಧನ ಸಂಸ್ಥೆ ದ.ರಾ.ಬೇಂದ್ರೆ ಸಂಗೀತ ಅಕಾಡೆಮಿ ಕಾರ್ಲ್‌ಮಾರ್ಕ್ಸ್‌ ನೆನಪಿನ ಕ್ರಾಂತಿಕಾರಿ ಸ್ಮಾರಕ ಕೇಂದ್ರ. 
ಕೆ.ಎಸ್‌.ಶರ್ಮಾ 
ಕೆ.ಎಸ್‌.ಶರ್ಮಾ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT