ನವಲಗುಂದ: ತೋಳಗಳ ಹಿಂಡೊಂದು ಕುರಿಗಳ ಮೇಲೆ ದಾಳಿ ನಡೆಸಿ 17 ಕುರಿಗಳು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಚೀಲಕವಾಡ ಕುಮಾರಗೋಪ್ಪ ಮದ್ಯದಲ್ಲಿರುವ ಜಮೀನಿನಲ್ಲಿ ಶುಕ್ರವಾರ ರಾತ್ರಿ ವೇಳೆ ನಡೆದಿದೆ.
ಗದಗ ತಾಲ್ಲೂಕಿನ ಅಸುಂಡಿ ಗ್ರಾಮದ ಸಿದ್ದಪ್ಪ ತಿರಕಪ್ಪ ವಗ್ಗಣ್ಣವರ ಎಂಬುವವರ ಕುರಿಗಳ ಹಿಂಡಿನ ಮೇಲೆ ರಾತ್ರಿ ಸಮಯದಲ್ಲಿ ತೋಳಗಳು ದಾಳಿ ಮಾಡಿವೆ. 17 ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದು, 5 ಕುರಿಗಳ ಸ್ಥಿತಿ ಚಿಂತಾಜನಕವಾಗಿದೆ.
ತೋಳ ದಾಳಿಯಿಂದಾಗಿ ಕುರಿ ಮಾಲೀಕರಿಗೆ ಸುಮಾರು ₹2ಲಕ್ಷ ನಷ್ಟ ಸಂಭವಿಸಿದೆ. ಅತಿವೃಷ್ಟಿ ಅನಾವೃಷ್ಟಿಯಿಂದ ಬಳಲುತ್ತಿದ್ದ ಕುರಿಗಾಹಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸ್ಥಳಕ್ಕೆ ನವಲಗುಂದ ಪಶು ವೈದ್ಯರು ಹಾಗೂ ಪೊಲೀಸರು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಪೊಲೀಸ್ ತನಿಖೆ ಮುಂದುವರೆದಿದೆ.
ಕುರಿಗಳಿಂದಲೇ ನಮ್ಮ ಕುಟುಂಬದ ಜೀವನ ಸಾಗುತ್ತಿತ್ತು. ಈ ಘಟನೆಯಿಂದ ನಮ್ಮ ಪರಿಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದೆ. ದಯವಿಟ್ಟು ನಮಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಕುರಿ ಮಾಲೀಕ ಸಿದ್ದಪ್ಪ ತಿರಕಪ್ಪ ವಗ್ಗಣ್ಣವರ ಕೇಳಿಕೊಂಡರು.