ಧಾರವಾಡ: ಆಹಾರ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ಮೇಲೆ ಶನಿವಾರ ಸಂಜೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಇಲಾಖೆ ವ್ಯವಸ್ಥಾಪಕ ಶಿವಶಂಕರ ಹಿರೇಮಠ ಅವರಿಂದ ₹1.15ಲಕ್ಷ ಹಾಗೂ ಚೆನ್ನಬಸವೇಶ್ವರ ನಗರದ ಮನೆಯಲ್ಲಿ ₹4.46ಲಕ್ಷ ಹಣವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಶಿವಶಂಕರ ಹಿರೇಮಠ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿಗಳು ಶನಿವಾರ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದರು.
ಶಿವಶಂಕರ ಹಿರೇಮಠ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಆಹಾರ ನಿರೀಕ್ಷಕರ ಮೂಲಕ ಪ್ರತಿ ತಿಂಗಳು ಸಾವಿರಾರು ರೂಪಾಯಿ ಹಣದ ಬೇಡಿಕೆ ಇಡುತ್ತಾರೆ. ಬೇಡಿಕೆ ಇಟ್ಟ ಹಣ ನೀಡಲು ಆಹಾರ ನಿರೀಕ್ಷರು ನ್ಯಾಯ ಬೆಲೆ ಅಂಗಡಿ ಅವರಿಂದ ಅಕ್ರಮ ಸಂಭಾವನೆ ವಸೂಲಿ ಮಾಡುತ್ತಾರೆ ಎಂಬ ಆರೋಪ ಕೇಳಿ ಬಂದಿತ್ತು.
ಎಸಿಬಿ ಡಿಎಸ್ಪಿ ಎಲ್. ವೇಣುಗೋಪಾಲ ಸೂಚನೆಯಂತೆ ಇನ್ಸ್ಪೆಕ್ಟರ್ ವೀರಭದ್ರಪ್ಪ ಕಡಿ ಅವರು ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಗೌಪ್ಯವಾಗಿ ಮಾಹಿತಿ ಸಂಗ್ರಹಿಸಿದ್ದರು. ಶನಿವಾರ ಕಚೇರಿ ವ್ಯವಸ್ಥಾಪಕರ ಮೇಲೆ ಸರ್ಕಾರದ ಪರವಾಗಿ ದೂರನ್ನೂ ಸಲ್ಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.