ಹುಬ್ಬಳ್ಳಿ: ವಿದ್ಯಾನಗರದ ಶ್ರೀಗಿರಿಮಲ್ಲೇಶ್ವರ ಆಶ್ರಮದಿಂದ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಶ್ರೀಕ್ಷೇತ್ರ ಇಂಚಗೇರಿ ಮಠಕ್ಕೆ ಹೊರಟ ದಿಂಡಿ ಪಲ್ಲಕ್ಕಿ ಪಾದಯಾತ್ರೆಗೆ ಮಠದ ಸದ್ಗುರು ಸ.ಸ.ರೇವಣಸಿದ್ಧೇಶ್ವರ ಮಹಾರಾಜರು ಭಾನುವಾರ ಚಾಲನೆ ನೀಡಿದರು.
ಧಾರವಾಡದ ಸತ್ತೂರ, ಲಕಮಾಪುರ, ಉಪ್ಪಿನಬೆಟಗೇರಿ, ದೊಡವಾಡ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಹಣಮಾಪುರ, ಮಾಲದಿನ್ನಿ, ನಾಗನೂರು ಮೂಲಕ ಹಾದು ಶ್ರೀಕ್ಷೇತ್ರ ಇಂಚಗೇರಿ ಮಠವನ್ನು ಜ.17ರಂದು ದಿಂಡಿ ಪಲ್ಲಕ್ಕಿ ಪಾದಯಾತ್ರೆ ತಲುಪಲಿದೆ.
ಪಾದಯಾತ್ರೆಗೂ ಮುನ್ನ ಮಠದಲ್ಲಿ ಪೂಜೆ–ಪುನಸ್ಕಾರ ನಡೆಯಿತು. ರೇವಣಸಿದ್ಧೇಶ್ವರ ಶ್ರೀಗಳು ಆಶೀರ್ವಾದ ನೀಡಿ, ಸ.ಸ.ಭಾವುಸಾಹೇಬ ಮಹಾರಾಜ, ಸ.ಸ.ಗಿರಿಮಲ್ಲೇಶ್ವರ ಮಹಾರಾಜ, ಸ.ಸ.ಗುರುಪುತ್ರೇಶ್ವರ ಮಹಾರಾಜ ಹಾಗೂ ಸ.ಸ.ಜಗನ್ನಾಥ ಮಹಾರಾಜರ ಪುಣ್ಯತಿಥಿ ಅಂಗವಾಗಿ ದಿಂಡಿ ಪಲ್ಲಕ್ಕಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಜ್ಜನವರು ಹಾಕಿಕೊಟ್ಟ ಮಾರ್ಗದಲ್ಲಿ ಸದ್ಭಕ್ತರು ನಡೆಯಬೇಕು. ಮಠದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಸರ್ವಧರ್ಮ ಸಮನ್ವಯ, ರಾಷ್ಟ್ರೀಯ ಭಾವೈಕ್ಯತೆ, ಸರ್ವೋದಯ, ವಿಶ್ವಶಾಂತಿಯನ್ನು ಪಾದಯಾತ್ರೆ ಉದ್ದಕ್ಕೂ ಗ್ರಾಮಗಳಲ್ಲಿ ತಿಳಿಸಲಾಗುವುದು ಎಂದರು.
ಪ್ರವಚನಕಾರರಾದ ಶಂಕರಪ್ಪ ಕೌಜಲಗಿ, ದಾಸಗೌಡ್ರು, ರಾಮಣ್ಣ ನಾಗನೂರ ಅವರು ಪ್ರವಚನ ನೀಡಿದರು.