ಧಾರವಾಡ: ದೆಹಲಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾ ಕಟ್ಟಡದಲ್ಲಿನ ವಸ್ತು ಸಂಗ್ರಹಾಲಯದಲ್ಲಿ 12ನೇ ಶತಮಾನದ ‘ಅನುಭವ ಮಂಟಪ’ದ ಮಾದರಿ ಸ್ಥಾಪಿಸಲು ಉದ್ದೇಶಿಸಿದ್ದು, ಈ ಕುರಿತ ಮಾಹಿತಿ ಪೂರೈಸುವಂತೆ ಕರ್ನಾಟಕ ವಿಶ್ವವಿದ್ಯಾಲಯವನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಕೋರಿದೆ.
‘ಭಾರತದ ಲೋಕತಂತ್ರ’ ಎಂಬ ವಿಷಯ ಕುರಿತ ವಿಭಾಗದಲ್ಲಿ ‘ಅನುಭವ ಮಂಟಪ’ದ ಮಾದರಿಯು ಇರಲಿದೆ ಎಂದು ಕವಿವಿಗೆ ಬರೆದ ಪತ್ರದಲ್ಲಿ ಕೇಂದ್ರದ ನಿರ್ದೇಶಕಿ ಡಾ. ಪ್ರಿಯಾಂಕಾ ಮಿಶ್ರಾ ತಿಳಿಸಿದ್ದಾರೆ.
ಪೂರಕ ಮಾಹಿತಿ ಸಂಗ್ರಹಿಸುವ ಹೊಣೆಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಪೀಠಕ್ಕೆ ಕುಲಪತಿ ಪ್ರೊ. ಕೆ.ಬಿ.ಗುಡಸಿ ನೀಡಿದ್ದಾರೆ.
ಕೇಂದ್ರದ ಸಂಯೋಜಕ ಡಾ. ಸಿ.ಎಂ. ಕುಂದಗೋಳ, ‘ಅನುಭವ ಮಂಟಪದ ಮಾದರಿ, ವಚನ ಸಾಹಿತ್ಯದ ಹಸ್ತಪ್ರತಿ ಹಾಗೂ ಲಭ್ಯವಿರುವ ಇತರ ಮಾಹಿತಿಗಳನ್ನು ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರವು ಕೇಳಿದೆ. ಈ ಬಗ್ಗೆ ಪರಿಣತರ ತಂಡದೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ’ ಎಂದರು.