ಧಾರವಾಡ:ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯನ್ನೂ ಒಳಗೊಂಡಂತೆ ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಆಪ್ತರ ವಿಚಾರಣೆಯನ್ನು ಸಿಬಿಐ ಅಧಿಕಾರಿಗಳು ಶನಿವಾರ ನಡೆಸಿದರು.
ಸಂಧಾನ ನಡೆಸಲು ಮುಂದಾಗಿದ್ದ ಆರೋಪದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿರುವ ಉತ್ತರ ವಲಯ ಐಜಿ ಕಚೇರಿಯ ಡಿವೈಎಸ್ಪಿ ತುಳಜಪ್ಪ ಸುಲ್ಫಿ ಅವರನ್ನು ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದರು. ಜತೆಗೆ ವಿನಯ ಕುಲಕರ್ಣಿ ಆಪ್ತ ಮನೋಜ ಕರ್ಜಗಿ ಹಾಗೂ ಅವರ ಮಾವ ಚಂದ್ರಶೇಖರ ಇಂಡಿ ಅವರ ವಿಚಾರಣೆಯನ್ನೂ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಡಿವೈಎಸ್ಪಿ ತುಳಜಪ್ಪ ಸುಲ್ಫಿ ಅವರು, ಯೋಗೀಶಗೌಡ ಗೌಡರ ಸಹೋದರ ಗುರುನಾಥಗೌಡ ಗೌಡರ ಬಳಿ ತೆರಳಿ ಸಂಧಾನ ನಡೆಸಲು ಪ್ರಯತ್ನಿಸಿದ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತಂತೆ ಈಗಾಗಲೇ ಉತ್ತರ ವಲಯ ಐಜಿಪಿ ತನಿಖೆ ನಡೆಸಿದ್ದರು.
ಶನಿವಾರ ಬೆಳಿಗ್ಗೆ ಇಲ್ಲಿನ ಉಪನಗರ ಠಾಣೆಗೆ ಕರೆಯಿಸಿಕೊಂಡ ಸಿಬಿಐ ಅಧಿಕಾರಿಗಳು ಸುಧೀರ್ಘ ವಿಚಾರಣೆ ನಡೆಸಿದರು.