ಹುಬ್ಬಳ್ಳಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ವಾರ್ಷಿಕ ಕ್ರಿಕೆಟ್ ಟೂರ್ನಿಯಲ್ಲಿ ಲೀಡ್ ಸ್ಟೋರಿ ತಂಡ ಚಾಂಪಿಯನ್ ಆಯಿತು.
ಇಲ್ಲಿನ ದೇಶಪಾಂಡೆ ನಗರದ ಜಿಮ್ಖಾನಾ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೆಡ್ಲೈನ್ ತಂಡ ನಿಗದಿತ 8 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 35 ರನ್ ಕಲೆಹಾಕಿತು. ಸುಲಭವಾದ ಗುರಿಯನ್ನು ಎದುರಾಳಿ ಲೀಡ್ ಸ್ಟೋರಿ 6.4 ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ತಲುಪಿತು.
ಪ್ರಶಾಂತ ದಿನ್ನಿ (ಪಂದ್ಯ ಶ್ರೇಷ್ಠ), ಸುರೇಶ ನಾಯಕ್ (ಟೂರ್ನಿ ಶ್ರೇಷ್ಠ), ಚನ್ನು ಮೂಲಿಮನಿ (ಉತ್ತಮ ಬ್ಯಾಟ್ಸ್ಮನ್), ರವೀಂದ್ರ ಹಳಿಜೋಳ (ಉತ್ತಮ ಬೌಲರ್) ಸಿದ್ಧನಗೌಡ (ಉತ್ತಮ ಕ್ಷೇತ್ರರಕ್ಷಕ) ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು.
ಪತ್ರಕರ್ತರಾದ ಮೋಹನ ಹೆಗಡೆ, ವೆಂಕಟೇಶ ಪ್ರಭು, ಮಲ್ಲಿಕಾರ್ಜುನ ಸಿದ್ದಣ್ಣವರ, ರಶ್ಮಿ ಎಸ್., ಷಣ್ಮುಖ ಕೋಳಿವಾಡ, ಜಗದೀಶ ಬುರ್ಲಬಡ್ಡಿ, ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ, ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ವೀರೇಶ ಉಂಡಿ ಸೇರಿದಂತೆ ಅನೇಕರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.