ಹುಬ್ಬಳ್ಳಿ: ‘ಈವರೆಗೆ ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದೆವು. ವ್ಯವಸ್ಥೆ ಅಸ್ಥಿರಗೊಂಡಾಗ ಮಠಾಧಿಪತಿಗಳು ರಾಜಕೀಯ ಪ್ರವೇಶಿಸುವುದು ಅನಿವಾರ್ಯ. ಯಾರೋ ಹೇಳಿಕೊಟ್ಟಿದ್ದರೆ, ನನ್ನ ನಿಲುವು ಇಷ್ಟು ಗಟ್ಟಿಯಾಗಿ ಇರುತ್ತಿರಲಿಲ್ಲ’ ಎಂದು ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
‘ನನ್ನ ಹಿಂದೆ ಬಿಜೆಪಿ ಮತ್ತು ಕಾಂಗ್ರೆಸ್ನವರೂ ಇದ್ದಾರೆ. ಎಲ್ಲ ಪಕ್ಷಗಳ ಪ್ರಮುಖರು ಸಂಪರ್ಕಿಸಿದ್ದಾರೆ. ಯಾರ ಒತ್ತಡಕ್ಕೂ ನಾನು ಬಗ್ಗಲ್ಲ. ನಾನು ತೆಗೆದುಕೊಳ್ಳುವ ನಿರ್ಣಯ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪರಿಣಾಮ ಬೀರುತ್ತದೆ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
‘ಕೆಲ ಮಠಾಧಿಪತಿಗಳು ಒತ್ತಡಕ್ಕೆ ಒಳಗಾಗಿದ್ದು, ಅವರನ್ನು ದುರ್ಬಳಕೆ ಮಾಡಲಾಗಿದೆ. ಕೆಲವು ಲಿಂಗಾಯತ ಮುಖಂಡರು ನನ್ನ ವಿರುದ್ದ ಮಾತಾಡುವಂತೆ ಮಾಡಿದ್ದಾರೆ. ಲಿಂಗಾಯತರ ವಿರುದ್ಧ ಅದೇ ಸಮಾಜದವರನ್ನು ಎತ್ತಿ ಕಟ್ಟಿ, ಒಡೆದು ಆಳುವ ನೀತಿ ಅನುಸರಿಸಲಾಗಿದೆ’ ಎಂದು ಅವರು ಆರೋಪಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಮಠಾಧಿಪತಿಗಳು ರಾಜಕಾರಣಕ್ಕೆ ಬರಬಾರದೆಂದು ಜೋಶಿ ಅಭಿಮಾನಿಗಳು ಹೇಳುತ್ತಿದ್ದಾರೆಯೇ ಹೊರತು ಪ್ರಜ್ಞಾವಂತರು ಹೇಳಿಲ್ಲ
ದಿಂಗಾಲೇಶ್ವರ ಸ್ವಾಮೀಜಿ ಶಿರಹಟ್ಟಿ ಮಠ
‘ಬಹುಸಂಖ್ಯಾತರ ನಿರ್ಲಕ್ಷ್ಯ ಸಲ್ಲ’
‘ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಬದಲಾಗಬೇಕು ಎಂಬ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈಶ್ವರಪ್ಪನಂತಹ ಮುಖಂಡರನ್ನೇ ಬಿಜೆಪಿ ನಿರ್ಲಕ್ಷ್ಯ ಮಾಡಿದೆ. ಲಿಂಗಾಯತರಿಗೆ ಮಾತ್ರವಲ್ಲ ಬೇರೆ ಸಮುದಾಯದವರಿಗೂ ಅನ್ಯಾಯವಾಗಿದೆ. ಅಲ್ಪಸಂಖ್ಯಾತರ ಓಲೈಕೆ ಮಾಡಿ ಬಹುಸಂಖ್ಯಾತರನ್ನು ನಿರ್ಲಕ್ಷ್ಯ ಮಾಡುವುದು ರಾಷ್ಟ್ರೀಯ ಪಕ್ಷಕ್ಕೆ ಶೋಭೆ ಅಲ್ಲ’ ಎಂದು ದಿಂಗಾಲೇಶ್ವರ ಶ್ರೀ ಹೇಳಿದರು.