ಹುಬ್ಬಳ್ಳಿ: ಅವಳಿ ನಗರದ ನಾಲ್ಕು ಕೆರೆಗಳ ಅಭಿವೃದ್ಧಿಗೆ ₹18 ಕೋಟಿ ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. ಶನಿವಾರ ನವನಗರದ ಹುಡಾ ಕಚೇರಿಯಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ನಾಗಶೆಟ್ಟಿಕೊಪ್ಪ ಕೆರೆಗೆ ₹2 ಕೋಟಿ, ಕೆಂಪಗೇರೆ ಕೆರೆಗೆ ₹3 ಕೋಟಿ, ಸಾಧನಕೆರೆಗೆ ₹3 ಕೋಟಿ ಹಾಗೂ ನುಗ್ಗಿಕೇರಿಗೆ ₹10 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ. ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಬರುತ್ತಾರೆ. ಅಲ್ಲಿಯ ಕೆರೆ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಲು ₹10 ಕೋಟಿ ವೆಚ್ಚ ಮಾಡಲು ಸಭೆ ತೀರ್ಮಾನಿಸಿದೆ.
ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ‘ಅವಳಿ ನಗರ ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ ಕೆಲವೆಡೆ ಅನಧಿಕೃತ ಬಡಾವಣೆಗಳು ತಲೆ ಎತ್ತುತ್ತಿವೆ. ಎಲ್ಲಿ ಅಂತಹ ಬಡಾವಣೆಗಳು ಇವೆ ಎಂದು ಗುರುತಿಸಿ, ತೆರವು ಕಾರ್ಯಾಚರಣೆಗೆ ಮುಂದಾಗಬೇಕು. ತೆರವು ಕಾರ್ಯ ನಿರಂತರವಾಗಿ ನಡೆದರೆ, ಅನಧಿಕೃತ ಬಡಾವಣೆ ನಿರ್ಮಿಸುವವರು ಹಿಂದೇಟು ಹಾಕುತ್ತಾರೆ’ ಎಂದರು.
ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಅಮೃತ ದೇಸಾಯಿ, ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಹುಡಾ ಸದಸ್ಯರಾದ ಚಂದ್ರಶೇಖರ ಗೋಕಾಕ, ಸುನೀಲ ಮೊರೆ, ಮೀನಾಕ್ಷಿ ಒಂಟಮೂರಿ, ಆಯುಕ್ತ ಎನ್.ಎಚ್. ಕುಮ್ಮಣ್ಣನವರ ಹಾಗೂ ಅಧಿಕಾರಿಗಳು ಇದ್ದರು.