ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ವೇದಾಂತ ಕಂಪನಿಯ ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ಚಟುವಟಿಕೆಯಡಿ (ಸಿಎಸ್ಆರ್) 5 ಹೊಸ ಅಂಗನವಾಡಿ ಕೇಂದ್ರಗಳ ನಿರ್ಮಾಣ ಸೇರಿದಂತೆ ಒಟ್ಟು 96 ಅಂಗನವಾಡಿ ಕೇಂದ್ರಗಳನ್ನು ಸುಸಜ್ಜಿತ ‘ನಂದಘರ್’ ಕೇಂದ್ರಗಳನ್ನಾಗಿ ನವೀಕರಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಎನ್ಎಂಡಿಸಿಯ ಸಿಎಸ್ಆರ್ ಅಡಿ 10 ಅಂಗನವಾಡಿ ಹಾಗೂ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ 9 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.
‘ನಂದಘರ್’ ಕೇಂದ್ರಗಳಲ್ಲಿ ಮಕ್ಕಳಿಗೆ ಆಸನಗಳ ವ್ಯವಸ್ಥೆ, ಸೌರ ವಿದ್ಯುತ್ ವ್ಯವಸ್ಥೆ, ಶುದ್ಧ ಕುಡಿಯುವ ನೀರಿಗಾಗಿ ವಾಟರ್ ಫಿಲ್ಟರ್ ವ್ಯವಸ್ಥೆ, ಸುಸಜ್ಜಿತ ಶೌಚಾಲಯ, ಸ್ಮಾರ್ಟ್ ಟಿ.ವಿ.ಮೂಲಕ ‘ಇ-ಕಲಿಕೆ’ ವ್ಯವಸ್ಥೆ, ಆಟಿಕೆ ಸಾಮಗ್ರಿಗಳು ಸೇರಿದಂತೆ ವಿವಿಧ ಸೌಲಭ್ಯಗಳಿವೆ ಎಂದಿದ್ದಾರೆ.
ಶಿಗ್ಗಾವಿ ತಾಲ್ಲೂಕಿನ ಹಿರೆಬೆಂಡಿಗೇರಿ, ಸವಣೂರು ಪಟ್ಟಣ, ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ, ನವಲಗುಂದ ತಾಲ್ಲೂಕಿನ ಮೊರಬ ಹಾಗೂ ಧಾರವಾಡ ತಾಲ್ಲೂಕಿನ ನುಗ್ಗಿಕೇರಿ ಗ್ರಾಮಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ತೆರವುಗೊಳಿಸಿ 5 ನಂದಘರ್ ಕೇಂದ್ರಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
‘ಮಕ್ಕಳಿಗೆ ಪೂರ್ವ ಪ್ರಾಥಮಿಕ ಹಂತದಿಂದಲೇ ಕಂಪ್ಯೂಟರ್ ಆಧಾರಿತ ಕಲಿಕೆ ಕೈಗೊಳ್ಳಲಾಗುತ್ತಿದೆ. ರೈಮ್ಸ್ಗಳನ್ನು ವಿಡಿಯೊ ಮೂಲಕ ಕಲಿಸಲಾಗುತ್ತದೆ. ಇದರಿಂದ ಪರಿಣಾಮಕಾರಿ ಕಲಿಕೆ ಸಾಧ್ಯವಾಗಲಿದ್ದು, ಆರಂಭಿಕ ಹಂತದಿಂದಲೇ ಮಕ್ಕಳಿಗೆ ಇ-ಕಲಿಕೆ ಪರಿಚಯ, ಜ್ಞಾನ ದೊರೆಯಲಿದೆ. ಇದರಿಂದ ತಂತ್ರಜ್ಷಾನ ಆಧಾರಿತ ಕಲಿಕೆಗೆ ಮಕ್ಕಳು ಸುಲಭವಾಗಿ ಹೊಂದಿಕೊಳ್ಳುತ್ತಾರೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.