ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ ನಿರ್ಮಾಣ: 15ರಿಂದ ದೇಣಿಗೆ ಸಂಗ್ರಹ ಅಭಿಯಾನ

ಮನೆ ಬಾಗಿಲಿಗೆ ವಿಎಚ್‌ಪಿ ಕಾರ್ಯಕರ್ತರು
Last Updated 31 ಡಿಸೆಂಬರ್ 2020, 12:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದ್ದು ಇದಕ್ಕೆ ಕೋಟ್ಯಂತರ ರೂಪಾಯಿ ಹಣದ ಅಗತ್ಯವಿದೆ. ಆದ್ದರಿಂದ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಕಾರ್ಯಕರ್ತರು ಜ. 15ರಿಂದ ಮನೆಮನೆಗೆ ತೆರಳಿ ಹಣ ಸಂಗ್ರಹಿಸುವ ಅಭಿಯಾನ ಆರಂಭಿಸಲಿದ್ದಾರೆ ಎಂದು ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಸುಧರ್ಮ ಸಭಾಂಗಣದಲ್ಲಿ ಗುರುವಾರ ವಿಶ್ವೇಶ ತೀರ್ಥ ಸೇವಾಸಂಘದ ವತಿಯಿಂದ ನಡೆದ ವಿಶ್ವೇಶತೀರ್ಥ ಸ್ವಾಮೀಜಿ ಅವರ ಪ್ರಥಮ ಸಮಾರಾಧನೆ ಮತ್ತು ಪೂಜಾ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ ‘ವಿಎಚ್‌ಪಿ ಕಾರ್ಯಕರ್ತರ ಪಡೆ ದೊಡ್ಡದಿರುವ ಕಾರಣ ಹಣ ಸಂಗ್ರಹಿಸುವ ಜವಾಬ್ದಾರಿ ಅವರಿಗೆ ನೀಡಲಾಗಿದೆ. ಅಭಿಯಾನ 45 ದಿನಗಳ ಕಾಲ ನಡೆಯಲಿದೆ’ ಎಂದರು.

‘ರಾಮಮಂದಿರ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು. ಪ್ರತಿಯೊಬ್ಬರೂ ಸಮರ್ಪಣಾ ಮನೋಭಾವದಿಂದ ದೇಣಿಗೆ ನೀಡಬೇಕು. ಕನಿಷ್ಠ ₹10ರಿಂದ ಗರಿಷ್ಠ ಎಷ್ಟು ಬೇಕಾದರೂ ಕೊಡಬಹುದು. ₹2,000 ಮೇಲ್ಪಟ್ಟು ನೀಡಿದರೆ ರಸೀತಿ ನೀಡಲಾಗುವುದು’ ಎಂದರು. ಉಡುಪಿಯ ಪೇಜಾವರ ಮಠ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಶಾಶ್ವತ ಟ್ರಸ್ಟಿಯಾಗಿದೆ.

ಜ್ಞಾನಯಜ್ಞ ಕಾರ್ಯಕ್ರಮದಲ್ಲಿ ಮಾತನಾಡಿದ ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾಂಸ ನರಸಿಂಹಾಚಾರ್ಯ ಕಟ್ಟಿ ’ವಿಶ್ವೇಶತೀರ್ಥ ಸ್ವಾಮೀಜಿ ಅವರ ಮೂರು ಪರ್ಯಾಯಗಳ ಸಂದರ್ಭದಲ್ಲಿ ಪೇಜಾವರ ಮಠದ ಪ್ರತಿಯೊಂದು ಜಾಗವು ತುಂಬಿ ತುಳುಕುತ್ತಿತ್ತು‘ ಎಂದು ನೆನಪಿಸಿಕೊಂಡರು.

ಮತ್ತೊಬ್ಬ ವಿದ್ವಾಂಸ ಶ್ರೀಕಾಂತ ಬಾಯರಿ ಆಚಾರ್ಯ ಗುರುಗಳು ’ವಿಶ್ವೇಶತೀರ್ಥ ಸ್ವಾಮೀಜಿ ಬುದ್ಧಿಜೀವಿಗಳಿಗೆ ಹಾಗೂ ಅಧ್ಯಾತ್ಮ ಬಂಧುಗಳಿಗೆ ಕೊಂಡಿಯಂತಿದ್ದರು’ ಎಂದರು.

ವಿಠೋಬ ಆಚಾರ್ಯ ಮಾತನಾಡಿ ‘ಸ್ವಾಮೀಜಿ ಪರಿಶಿಷ್ಟ ಜಾತಿಯವರು ವಾಸಿಸುವ ಸ್ಥಳಗಳಲ್ಲಿ ಪ್ರವೇಶಮಾಡಿ ಎಲ್ಲ ಪರಿಶಿಷ್ಟರನ್ನು ಒಗ್ಗೂಡಿಸಿ ನಾವೆಲ್ಲರೂ ಹಿಂದೂಗಳು ಎಂಬ ಭಾವನೆ ಭಿತ್ತಿ ಹಿಂದೂಗಳೆಲ್ಲ ಒಂದೇ ಎನ್ನುವ ಭಾವನೆ ಮೂಡಿಸಿದ್ದಾರೆ’ ಎಂದು ಸ್ಮರಿಸಿದರು.

ಸಮಾಜದ ಪ್ರಮುಖರಾದ ಶ್ರೀಕಾಂತ ಕೆಮ್ತೂರು, ಗೋಪಾಲ ಕುಲಕರ್ಣಿ, ಗೋವಿಂದ ಮೈಸೂರು,ಗುರುರಾಜ ಬಾಗಲಕೋಟೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಇದಕ್ಕೂ ಮೊದಲು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಪಾದಪೂಜೆ ನಡೆಯಿತು. ಎಬಿಎಂಎಂ ಹಾಸ್ಟೆಲ್‌ನಲ್ಲಿ ವಿವಿಧ ಪೂಜೆಗಳನ್ನು ನೆರವೇರಿಸಿದರು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

’ಗೋ ಹತ್ಯೆ ನಿಷೇಧ ಕಾಯ್ದೆ; ಸ್ವಾಗತಾರ್ಹ‘

ಗೋ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ‘ಈ ಕಾಯ್ದೆ ಜಾರಿಗೆ ತರುವುದು ಅತ್ಯಂತ ಅವಶ್ಯಕವಾಗಿತ್ತು. ಸರ್ಕಾರ ಈ ಕೆಲಸ ಮಾಡಿದೆ’ ಎಂದರು. ಸ್ವಾಮೀಜಿಗಳು ನೇರವಾಗಿ ರಾಜಕಾರಣದಲ್ಲಿ ಮೂಗು ತೂರಿಸುವುದು ಸರಿಯಲ್ಲ. ಈಗ ನಡೆಯುತ್ತಿರುವ ಬೆಳವಣಿಗೆ ಸರಿಯೂ ಅಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT