ಧಾರವಾಡ: ಹಿಂದೂಸ್ತಾನಿ ಸಂಗೀತದ ದಿಗ್ಗಜ ಡಾ. ಮಲ್ಲಿಕಾರ್ಜುನ ಮನಸೂರ ಅವರ 28 ನೇ ಪುಣ್ಯಸ್ಮರಣೆ ನಿಮಿತ್ತ ಡಾ. ಮನಸೂರ ಅವರ ಸಮಾಧಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಶನಿವಾರ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಶಿವಾನಂದ ಕರಾಳೆ, ಡಾ.ಮಲ್ಲಿಕಾರ್ಜುನ ಮನಸೂರ ಅವರ ಪುಣ್ಯಸ್ಮರಣೆ ನಿಮಿತ್ಯ ಪ್ರತಿ ವರ್ಷ ಆಯೋಜಿಸಲಾಗುತ್ತಿದ್ದ ಸಂಗೀತೋತ್ಸವವನ್ನು ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಮುಂದೂಡಲಾಗಿದೆ.
ಕಾರ್ಯಕ್ರಮಗಳನ್ನು ರದ್ದುಪಡಿಸಿ, ಅತ್ಯಂತ ಸರಳವಾಗಿ ಪೂಜೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಟ್ರಸ್ಟ್ ಸದಸ್ಯರ ಆಶಯದಂತೆ ಸಂಗೀತೋತ್ಸವವನ್ನು ಮುಂದುವರೆಸಲಾಗುವುದು. ಡಾ.ಮಲ್ಲಿಕಾರ್ಜುನ ಮನಸೂರವರು ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಾಷ್ಟ್ರೀಯ ಸ್ಮಾರಕ ಟ್ರಸ್ಟನ್ನು 1997ರಲ್ಲಿಯೇ ರಚಿಸಿದೆ. ಟ್ರಸ್ಟ್ ವತಿಯಿಂದ ಅವರು ವಾಸವಿದ್ದ ಮನೆಯನ್ನು ನವೀಕರಿಸಿರಿ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ. ಹಿಂದೂಸ್ತಾನಿ ಸಂಗೀತವನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಸಂಗೀತ ಶಾಲೆ ಪ್ರಾರಂಭಿಸಿದೆ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ, ಟ್ರಸ್ಟ್ ಸದ್ಯಸರಾದ ಪದ್ಮಶ್ರೀ ಡಾ.ಎಂ.ವೆಂಕಟೇಶ್ ಕುಮಾರ್,ನೀಲಾ ಎಂ. ಕೊಡ್ಲಿ,ಡಾ.ದಿಲೀಪ್ ದೇಶಪಾಂಡೆ,ಶಂಕರ ಕುಂಬಿ, ಭಾಗವಹಿಸಿದ್ದರು, ಪ್ರಕಾಶ ಬಾಳಿಕಾಯಿ,ಡಾ.ಚಂದ್ರಿಕಾ ಕಾಮತ್,ಚಂದ್ರಕಾಂತ ಆಲೂರ,ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಮಂಜುಳಾ ಯಲಿಗಾರ ಇದ್ದರು.
ಮಲ್ಲಿಕಾರ್ಜುನ ಮನಸೂರ ಅವರ ಮರಿ ಮೊಮ್ಮಗಳಾದ ಮಾನಸ ಆಲೂರ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅಲ್ಲಮಪ್ರಭು ಕಡಕೋಳ, ಪರಶುರಾಮ ಕಟ್ಟಿಸಂಗಾವಿ ವಾದ್ಯ ಸಾಥ್ ನೀಡಿದರು.