ಹುಬ್ಬಳ್ಳಿ: ಕೇಂದ್ರ ಸರ್ಕಾರ ಮಂಡಿಸಿದ ಕೃಷಿ ಮಸೂದೆಯಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಇದರ ಬಗ್ಗೆ ಅನ್ನದಾತರಿಗೆ ಜಾಗೃತಿ ಮೂಡಿಸಬೇಕು ಎಂದು ರೈತ ಮೋರ್ಚಾದ ಧಾರವಾಡ ವಿಭಾಗದ ಸಂಘಟನಾ ಕಾರ್ಯದರ್ಶಿ ಜಯತೀರ್ಥ ಕಟ್ಟಿ ಹೇಳಿದರು.
ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ರೈತ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ‘ರೈತರು ದೇಶದ ಬೆನ್ನೆಲುಬು, ಬಿಜೆಪಿ ಯಾವಾಗಲೂ ಅವರ ಪರ ಇರುತ್ತದೆ. ಕಾಂಗ್ರೆಸ್ನವರು ಮಧ್ಯವರ್ತಿಗಳ ಪರ ಇದ್ದು, ರೈತರ ದಾರಿ ತಪ್ಪಿಸುತ್ತಿದ್ದಾರೆ. ಹೊಸ ಕಾಯ್ದೆಯಿಂದಾಗಿ ರೈತರು ತಾವು ಬೆಳೆದ ಬೆಳೆಗಳನ್ನು ಮಧ್ಯವರ್ತಿಗಳ ಕಾಟವಿಲ್ಲದೆ ನೇರವಾಗಿ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು’ ಎಂದರು.
ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಈಶ್ವರಗೌಡ ಪಾಟೀಲ ಮಾತನಾಡಿ ‘ನಮ್ಮ ಕಾರ್ಯಕರ್ತರು ಎಲ್ಲಾ ರೈತರ ಮನೆಮನೆಗೆ ತೆರಳಿ ಕೃಷಿ ಮಸೂದೆ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಕರೆ ನೀಡಿದರು.
ಸಭೆಯಲ್ಲಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವಣ್ಣೆಪ್ಪ ಬಾಳಿಗಿ, ರೈತರಾದ ಶಿವಾನಂದ ಹೊಸೂರ, ನಿಂಗಪ್ಪ ಸಪೂರಿ, ಪಾಲಿಕೆಯ ಮಾಜಿ ಸದಸ್ಯರಾದ ಮಲ್ಲಿಕಾರ್ಜುನ ಗುಂಡೂರ, ಮಂಜುನಾಥ ನಿರಲಕಟ್ಟಿ, ರಾಜು ಕೊರ್ಯಾಣಮಠ, ಷಣ್ಮುಗಪ್ಪ ಪಂಚಾಂಗಮಠ, ಜಿಲ್ಲಾ ವಕ್ತಾರ ರವಿ ನಾಯ್ಕ ಪಾಲ್ಗೊಂಡಿದ್ದರು.