ಧಾರವಾಡ: ಇಲ್ಲಿನ ಮೀನು ಮಾರುಕಟ್ಟೆ ಸಮೀಪದಲ್ಲಿ ಇದ್ದ ಎರಡು ಕಟ್ಟಿಗೆ ಅಡ್ಡೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿಯಾಗಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ನಗರದ ಮಣಕಿಲ್ಲಾದಲ್ಲಿ ಇರುವ ತೋಟಪ್ಪ ಗುರುಸಿದ್ದಪ್ಪ ಸಣ್ಣನಾಗನ್ನವರ ಹಾಗೂ ಕೃಷ್ಣಾ ಹನುಮಂತಪ್ಪ ಬೆಳಗಳಿ ಅವರಿಗೆ ಸಂಬಂಧಿಸಿದ ಕಟ್ಟಿಗೆ ಅಡ್ಡೆಗಳು ಸುಟ್ಟು ಕರಕಲಾಗಿವೆ. ಆಕಸ್ಮಿಕವಾಗಿ ಅಡ್ಡಯೊಂದರಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು. ಅದರ ಪಕ್ಕದಲ್ಲಿ ಮತ್ತೊಂದು ಕಟ್ಟಿಗೆ ಅಡ್ಡೆ ಇದ್ದ ಪರಿಣಾಮ ಬೆಂಕಿ ಅದಕ್ಕೂ ಹೊತ್ತುಕೊಂಡಿದೆ.
ಪರಿಣಾಮ ಅಡ್ಡೆ ತುಂಬ ಇಡಲಾಗಿದ್ದ ಕಟ್ಟಿಗೆಗಳಿಗೆ ಬೆಂಕಿ ಕೆನ್ನಾಲಿಗೆ ದೊಡ್ಡಮಟ್ಟದಲ್ಲಿ ಚಾಚಿಕೊಂಡಿತ್ತು. ಅದನ್ನು ನೋಡಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿ ಮುಟ್ಟಿಸಿದರು. ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಷ್ಟರಲ್ಲಾಗಲೇ ತೋಟಪ್ಪನವರಿಗೆ ಸೇರಿದ ಅಡ್ಡೆಯಲ್ಲಿ ₹30 ಲಕ್ಷ ಹಾಗೂ ಕೃಷ್ಣಾ ಅವರ ಅಡ್ಡೆಯಲ್ಲಿ ₹25 ಲಕ್ಷ ಮೌಲ್ಯದ ಕಟ್ಟಿಗೆಗಳು ಸುಟ್ಟು ಕರಕಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.